ಶ್ರವಣಬೆಳಗೊಳ: ಇಲ್ಲಿಯ ದಿಗಂಬರ ಜೈನ ಮಠದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಕಡೇ ಶ್ರಾವಣ ಶುಕ್ರವಾರದ ಪ್ರಯುಕ್ತ ಪದ್ಮಾವತಿ ದೇವಿಗೆ ವಿಶೇಷ ಪೂಜೆಯನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕ್ಷೇತ್ರದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶುಕ್ರವಾರ ವೈಭವದೊಂದಿಗೆ ನೆರವೇರಿತು.
ಬಸದಿಯ ಪ್ರಾಂಗಣದಲ್ಲಿ 23ನೇ ತೀರ್ಥಂಕರ ಪಾರ್ಶ್ವನಾಥ ಸ್ವಾಮಿಯ ಯಕ್ಷಿ ಪದ್ಮಾವತಿ ದೇವಿ ಮತ್ತು ತೀರ್ಥಂಕರರನ್ನು ಪೀಠದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ದೇವಿಗೆ ವಿಶೇಷ ಪುಷ್ಪ ಮತ್ತು ಆಬರಣಗಳಿಂದ ಅಲಂಕರಿಸಿದ್ದು, ಸನ್ನಿಧಿಯಲ್ಲಿ ಅಷ್ಟಮಂಗಲಗಳೊಂದಿಗೆ ಮಂಗಲ ಕಲಶಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಶ್ರಾವಕಿಯರು ಮಂತ್ರಗಳೊಂದಿಗೆ ಪೂಜೆ ನೆರವೇರಿಸಿದರು. ಹಜಾರಿ ಪಾರ್ಶ್ವನಾಥ ಶಾಸ್ತ್ರಿಯಿಂದ ತತ್ವಾರ್ಥ ಸೂತ್ರ ವಾಚನ, ಮೋಹನ್ ಅವರಿಂದ ಸಂಗೀತ, ಬಿ.ಜೆ.ಮಾನ್ಯ ಜೈನ್ ಅವರಿಂದ ಭರತನಾಟ್ಯ, ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಂಖಸೇವೆ, ಚಂಡೆವಾಧ್ಯ ಚಾಮರಸೇವೆ, ಮಣಿಕಂಠ ದೊರೆಸ್ವಾಮಿ ತಂಡದಿಂದ ಮಂಗಲವಾಧ್ಯಗಳು ಮಹಾಶಾಂತಿಧಾರಾ ಮಹಾಮಗಳಾರತಿ ನೆರವೇರಿತು. ನಂತರ ಗಂಧೋದಕ ವಿತರಿಸಲಾಯಿತು.
ಲಾಡು ವಿತರಣೆ ನಡೆಯಿತು. ಪೂಜಾಸೇವಾಕರ್ತರಿಂದ ಮಹಿಳೆಯರಿಗೆ ಕುಂಕುಮ, ಬಳೆ, ರವಿಕೆ ಕಣವನ್ನು ವಿತರಿಸಲಾಯಿತು.
ಪೂಜೆಯ ನೇತೃತ್ವವನ್ನು ಎಸ್.ಡಿ.ನಂದಕುಮಾರ್ ಶಾಸ್ತ್ರಿ ವಿಮಲ್, ಕಿರಣ್ ತಂಡ ವಹಿಸಿದ್ದರು. ಅನುಪಮಕೀರ್ತಿ ಮಹಾರಾಜ, ಗ್ರಾಮ ಪಂಚಾಯಿತಿ ಸದಸ್ಯೆ ಶಾಲಿನಿ ದೇವೇಂದ್ರಕುಮಾರ್, ಕಾರ್ಯದರ್ಶಿ ಎಸ್.ಪಿ.ಮಹೇಶ್, ವ್ಯವಸ್ಥಾಪಕ ವಿಜಯಂತ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.