ಹೊಳೆನರಸೀಪುರ: ಶ್ರೀರಾಮದೇವರ ಅಣೆಕಟ್ಟೆ ದಕ್ಷಿಣ ನಾಲೆಯಲ್ಲಿ ಹೂಳು ತೆಗೆಯದ ಕಾರಣ ಹರಿಯಲು ಸಾಧ್ಯವಾಗದೆ ನಾಲೆಯ ಮೇಲಿಂದ ಹರಿದು ಸುತ್ತಲ ಜಮೀನಿಗೆ ನುಗ್ಗಿ ಬೆಳೆಗಳು ನಾಶವಾಗಿದೆ.
ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವ್ದಾರಿಗೆ ರೈತರ ಬೆಳೆಗಳು ನಾಶವಾಗಿ, ನಷ್ಟ ಉಂಟಾಗಿದೆ ಎಂದು ತಟ್ಟೇಕರೆ ಗ್ರಾಮದ ಅಶೋಕ ಮತ್ತು ದಾಕ್ಷಾಯಿಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ, ಅಣೆಕಟ್ಟೆಯಲಿ ನೀರು ತುಂಬಿದ ನಂತರ ಈ ನಾಲೆ ಮೂಲಕ ನೀರು ಹರಿಸುತ್ತಿದ್ದರಿಂದ ಕೃಷಿ ಚಟುವಟಿಕೆಗೆ ಅನುಕೂಲ ಆಗುತ್ತಿತ್ತು. ಈ ವರ್ಷ ನೀರಾವರಿ ಇಲಾಖೆಯ ಅದಿಕಾರಿಗಳು ನೀರು ಬಿಡುವ ಮುಂಚೆ ನಾಲೆಯಲ್ಲಿ ಹೂಳು ತೆಗೆಸದ ಕಾರಣ ಇಂದು ರೈತರಿಗೆ ನಷ್ಟವಾಗಿದೆ. ಅಗತ್ಯ ಇಲ್ಲದ ಕಡೆ ನೀರು ಹರಿದು ಅನಾವಶ್ಯಕವಾಗಿ ಪೋಲಾಗುತ್ತಿದೆ ಎಂದಿದ್ದಾರೆ.
ನೀರಾವರಿ ಇಲಾಖೆ ಅಧಿಕಾರಿಗಳು ತಕ್ಷಣ ನಾಲೆಯಲ್ಲಿನ ಹೂಳು ತೆಗೆಸಿ ರೈತರ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದ್ದಾರೆ. ಹೂಳು ತೆಗೆಸದಿದ್ದರೆ ಈ ಭಾಗದ ರೈತರಿಗೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.