
ಹೊಳೆನರಸೀಪುರ: ಸಮಾಜ, ಪರಿಸರದಿಂದ ಎಲ್ಲವನ್ನೂ ಪಡೆಯುವ ನಾವು ಸಂಘ ಸಂಸ್ಥೆಗಳ ಸದಸ್ಯರಾಗಿ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡು ನಮ್ಮ ಮೇಲಿನ ಋಣವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷೆ ಉಮಾ ಸಾಯಿರಾಂ ಸಲಹೆ ನೀಡಿದರು.
ಶನಿವಾರ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಮಹಿಳಾ ಮಂಡಳಿ ಆಯೋಜಿಸಿದ್ದ 2026ನೇ ಸಾಲಿನ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆರ್ಯವೈಶ್ಯ ಮಹಾಸಭಾ ಶ್ರಮಿಸುತ್ತಿದೆ. ಸಮಾಜಮುಖಿ, ಸೃಜನಶೀಲ, ಕೆಲಸಗಳಿಗೆ ತೊಡಗಿಸಿಕೊಳ್ಳಲು 45 ವರ್ಷಗಳಿಂದ ಅವಕಾಶ ಮಾಡಿಕೊಡುತ್ತಿದೆ ಎಂದರು.
ಆರ್ಯವೈಶ್ಯ ಜನಾಂಗದ ಶ್ರೇಯೋಭಿವೃದ್ಧಿಗಾಗಿ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಪರಂಪರೆ, ಧಾರ್ಮಿಕ, ಸಾಮಾಜಿಕ, ಪರಿಸರ ಸಂರಕ್ಷಣೆ, ಸೇರಿದಂತೆ ಹಲವಾರು ಕಾರ್ಯಕ್ರಮಗಳು ಪ್ರಸ್ತುತ ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಮೂಲಕ ನಡೆಸುತ್ತಿದೆ ಎಂದರು.
ರಾಜ್ಯದಾದ್ಯಂತ ಆರ್ಯವೈಶ್ಯ ಜನಾಂಗದ ದೇವಾಲಯಗಳಲ್ಲಿ ಪ್ರಾರಂಭಿಸಿರುವ ಶುಕ್ರವಾರದ ಸರದಿ ಪೂಜಾ ಕಾರ್ಯಕ್ರಮವನ್ನು ನಿರಂತರ ನಡೆಸಬೇಕು. ನಮ್ಮ ಜನಾಂಗದ ಆಗುಹೋಗುಗಳ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ನಿರ್ಗಮಿತ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಶಶಿ ಶ್ರೀನಿವಾಸ್ ಕಳೆದ ಒಂದು ವರ್ಷದಲ್ಲಿ ನಡೆಸಿದ ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ನೂತನ ಪದಾಧಿಕಾರಿಗಳೂ ಉತ್ತಮ ಕೆಲಸಗಳನ್ನು ಮಾಡಿ ಎಂದರು.
ವಾಸವಿ ಮಹಿಳಾ ಮಂಡಳಿಗೆ ನೂತನವಾಗಿ ಅಯ್ಕೆ ಅಗಿರುವ ಅಧ್ಯಕ್ಷೆ ಲಕ್ಷ್ಮೀ ಗುಪ್ತ ನಿರ್ಗಮಿತ ಅಧ್ಯಕ್ಷೆ ಶಶಿ ಶ್ರೀನಿವಾಸ್ ಅವರಿಂದ ಅಧಿಕಾರ ಸ್ವೀಕರಿಸಿದರು ನೂತನ ಉಪಾಧ್ಯಕ್ಷೆ ಮತ್ತು ಖಜಾಂಚಿ ಭಾರತಿ ರಮೇಶ್, ಕಾರ್ಯದರ್ಶಿ ವೀಣಾ ಸತೀಶ್, ಜಂಟಿ ಕಾರ್ಯದರ್ಶಿ ಪ್ರೇಮಾ ಆನಂದ್ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾದ ಕಾರ್ಯದರ್ಶಿ ಸಂಧ್ಯಾ ಜಗದೀಶ್, ಖಜಾಂಚಿ ಶಕುಂತಲಾ, ಪ್ರತಿಭಾ, ಕುಸುಮ ತ್ರೈಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕಿ ಲತಾ ಶ್ರೀನಿವಾಸ್, ಆರ್ಯವೈಶ್ಯ ಮಹಿಳಾ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯೆ ಸುಜಾತಾ ರವಿಕುಮಾರ್ ಉಪಸ್ಥಿತರಿದ್ದರು.
ರಾಧಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.