ಹಾಸನ: ‘ಭಗತ್ ಸಿಂಗ್ ಮತ್ತು ನೇತಾಜಿ ಅವರ ಕನಸಿನ ಸಮಾಜವಾದಿ ಭಾರತ ನಿರ್ಮಿಸಲು ಸಜ್ಜಾಗಬೇಕಿದೆ. ಶೋಷಣೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂಬುದು ಅವರ ನಿಲುವಾಗಿತ್ತು’ ಎಂದು ಎಐಡಿಎಸ್ಒ ರಾಜ್ಯ ಘಟಕದ ಉಪಾಧ್ಯಕ್ಷೆ ಸಿ.ಎಂ. ಅಪೂರ್ವಾ ತಿಳಿಸಿದರು.
ನಗರದ ಎಐಡಿಎಸ್ಒ ಕಚೇರಿಯ ವಿದ್ಯಾಸಾಗರ್ ಹಾಲ್ನಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅವರು ಮಾತನಾಡಿದರು.
‘ಶಿಕ್ಷಣದ ವ್ಯಾಪಾರೀಕರಣ, ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು, ರೈತ ಕಾರ್ಮಿಕರ ಸಾವು ಮಿತಿಮೀರಿದೆ. ಈ ಎಲ್ಲ ಸಮಸ್ಯೆ ತೊಡೆದು ಹಾಕಬೇಕಾದರೆ, ಸಮಾಜವಾದಿ ಭಾರತದಿಂದ ಮಾತ್ರವೇ ಸಾಧ್ಯ ಎಂದು ಭಗತ್ ಸಿಂಗ್ ಮತ್ತು ನೇತಾಜಿ ನಂಬಿದ್ದರು. ಅವರ ಕನಸಿನ ಭಾರ ನಿರ್ಮಾಣ ಮಾಡಲು ವಿದ್ಯಾರ್ಥಿ ಯುವ ಸಮುದಾಯ ಸಜ್ಜಾಗಬೇಕು’ ಎಂದು ಸಲಹೆ ನೀಡಿದರು.
‘ ಭಾರತದ ನವೋದಯ ಕಾಲದಲ್ಲಿ ವಿದ್ಯಾಸಾಗರ್, ರಾಜಾರಾಮ್ ಮೋಹನ್ ರಾಯ್, ಸಾವಿತ್ರಿಬಾಯಿ ಫುಲೆ, ಜ್ಯೋ ತಿರಾವ್ ಫುಲೆ ಇದ್ದರು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ನೇತಾಜಿ ಮತ್ತು ಭಗತ್ ಸಿಂಗ್ ಸ್ವಾತಂತ್ರ್ಯ ಸಂಗ್ರಾಮದ ನೈಜ ಗುರಿಯನ್ನು ನಿಖರವಾಗಿ ಸಾರಿದ್ದರು. ರಷ್ಯಾದಲ್ಲಿ ನಡೆದ ಕ್ರಾಂತಿ, ಭಾರತದ ಕ್ರಾಂತಿಕಾರಿಗಳ ಮೇಲೆ ಗಾಢ ಪ್ರಭಾವ ಬೀರಿತ್ತು. ಭಗತ್ ಸಿಂಗ್ ಮತ್ತು ನೇತಾಜಿ ಇಬ್ಬರೂ ರಷ್ಯಾ ಮಾದರಿ ಸಮಾಜವಾದಿ ಭಾರತ ನಿರ್ಮಿಸಬೇಕೆಂಬ ಆಶಯ ಹೊಂದಿದ್ದರು. ಮಾನವನಿಂದ, ಮಾನವನ ಶೋಷಣೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂಬುದು ಅವರ ನಿಲುವಾಗಿತ್ತು. ಭಾರತದಲ್ಲಿ ಕ್ರಾಂತಿ ನೆರವೇರಬೇಕು. ಆ ಕ್ರಾಂತಿಯನ್ನು ಕಾರ್ಮಿಕರು ಮತ್ತು ರೈತರು ನೆರವೇರಿಸಬೇಕೆಂದು ಅವರು ಕನಸನ್ನು ಕಂಡಿದ್ದರು’ ಎಂದು ವಿವರಿಸಿದರು.
‘ಅವರ ಕನಸು ಕನಸಾಗಿಯೇ ಉಳಿದಿದೆ. ಯಾವ ಕ್ರಾಂತಿ, ಜನತೆಗೆ ಸ್ವಾತಂತ್ರ್ಯವನ್ನು ತಂದುಕೊಟ್ಟು ಶೋಷಣೆ ಅಸಾಧ್ಯಗೊಳಿಸುತ್ತದೆಯೋ, ಅಂತಹ ಕ್ರಾಂತಿಯ ಸಂದೇಶವನ್ನು ವಿದ್ಯಾರ್ಥಿಗಳು ಹಾಗೂ ಯುವಜನರು ದೇಶದ ಮೂಲೆಮೂಲೆಗೂ ಒಯ್ಯಬೇಕು. ಕೋಟ್ಯಂತರ ಮರ್ದಿತ ಜನರಿಗೆ ತಲುಪಿಸಬೇಕು. ಶೋಷಣೆಗೆ ಮುಕ್ತಾಯ ಹಾಡಲು ಸಮಾಜವಾದಿ ಕ್ರಾಂತಿ ಅನಿವಾರ್ಯ ಎಂದು ಭಗತ್ ಸಿಂಗ್ ನಂಬಿದ್ದರು’ ಎಂದು ಹೇಳಿದರು.
ಸಹ ಸಂಚಾಲಕಿ ಸುಷ್ಮಾಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್ಒ ರಾಜ್ಯ ಘಟಕದ ಖಜಾಂಚಿ ಸುಭಾಷ್, ರಾಜ್ಯ ಘಟಕದ ಉಪಾಧ್ಯಕ್ಷೆ ಚಂದ್ರಕಲಾ , ಸಂಚಾಲಕಿ ಚೈತ್ರಾ, ಪದಾಧಿಕಾರಿಗಳಾದ ಶ್ಯಾಮಲಾ, ಯಾಸ್ಮಿನ್, ವಿನೋದ್, ಪುರುಷೋತ್ತಮ್ , ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.