ಹಾಸನ: ‘ಹಾಸನ ವಿಧಾನಸಭಾ ಕ್ಷೇತ್ರದ ಜನರಿಗೆ ಒಳ್ಳೆಯದಾಗಬೇಕು ಮತ್ತು ಉತ್ತಮ ನಾಯಕತ್ವ ಇರಬೇಕೆಂದು ಶಕ್ತಿ ದೇವತೆ ಪುರದಮ್ಮನಿಗೆ ಹರಕೆ ಕಟ್ಟಿಕೊಂಡಿದ್ದೆ. ಅದನ್ನೀಗ ತೀರಿಸಿದ್ದೇನೆ’ ಎಂದು ಶಾಸಕ ಪ್ರೀತಂಗೌಡ ಹೇಳಿದರು.
ದೇವಿಗೆ ಬುಧವಾರ ಹರಕೆ ಅರ್ಪಿಸಿ ಮಾತನಾಡಿದ ಅವರು, ‘ರಾಜಕಾರಣಕ್ಕೆ ಬರುವ ಮುಂಚೆಯಿಂದಲೂ ಪುರದಮ್ಮ ಹಾಗೂ ಹಾಸನಾಂಬೆಯ ಪರಮ ಭಕ್ತ. 2011, 2015 ರಲ್ಲಿ ನಾಯಕ ಸಿ.ಟಿ.ರವಿ ಅವರೇ ಬಂದು ಪುರದಮ್ಮನಿಗೆ ಹರಕೆ ತೀರಿಸಿ ಹೋಗಿದ್ದರು. ನಾನು ಕಟ್ಟಿಕೊಂಡಿದ್ದ ಹರಕೆಯನ್ನು ಈಗ ತೀರಿಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.
‘ಹಾಸನ ವಿಧಾನಸಭಾ ಕ್ಷೇತ್ರದ ಜನರಿಗೆ ಒಳ್ಳೆಯದಾಗಬೇಕು. ಉತ್ತಮವಾದ ನಾಯಕತ್ವ ಇರಬೇಕು. ಆ ನಾಯಕತ್ವ ಅಭಿವೃದ್ಧಿ ಪರವಾಗಿ ಯೋಚನೆ ಮಾಡುವಂತಿರಬೇಕು ಎಂದು ದೇವರಲ್ಲಿ ಹರಕೆ ಮಾಡಿದ್ದೆ. ಹಳೆಯ ಹರಕೆಯನ್ನು ಪೂರೈಸಿದ್ದೇನೆ, ಹೊಸದನ್ನು ಕೊಟ್ಟರೆ ಮತ್ತೊಮ್ಮೆ ಪ್ರಸಾದ ಕೊಟ್ಟು ದೇವಿಯ ಸೇವೆ ಮಾಡುತ್ತೇನೆ. ದೇವಿಯಲ್ಲಿ ರಾತ್ರಿ ಪ್ರಸಾದ ಆಯ್ತು. ಆ ಹರಕೆ ಏನು ಎಂಬುದನ್ನು ನಂತರಹೇಳುತ್ತೇನೆ’ ಎಂದರು.
ಇದಕ್ಕೂ ಮುನ್ನ ಪ್ರೀತಂ ಗೌಡ ಕುಟುಂಬ ಸಮೇತರಾಗಿ ಪುರದಮ್ಮ ದೇವಿಯ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹರಕೆ ತೀರಿಸಲು ಸುಮಾರು 140 ಹೋತಗಳನ್ನು ಬಲಿ ಕೊಡಲಾಗಿದೆ ಎನ್ನಲಾಗಿದೆ. ನಗರದ ಹೊರವಲಯದ ಉದ್ದೂರು ಸಮೀಪ ಬೃಹತ್ ಪೆಂಡಾಲ್ನಲ್ಲಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.