ಹೆತ್ತೂರು: ‘ಮಹಿಳೆಯರು ವೃತ್ತಿ ಜೀವನ ಮತ್ತು ಸಂಸಾರಿಕ ಜೀವನ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಮಹಿಳೆಯರು ತ್ಯಾಗಿಜೀವಿಗಳು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಯುವ ರೈತ ಸಂಘ ಭಾನುವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ವಂತ ಏಳ್ಗೆಯ ಬದಲಿಗೆ ಕುಟುಂಬದ ಶ್ರೇಯಸ್ಸು ಬಯಸುವುದು ಭಾರತೀಯ ಮಹಿಳೆಯರು. ಇದರಿಂ ದಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಹಲವು ಉತ್ತಮ ಅವಕಾಶಗಳು ಕೈ ತಪ್ಪಲು ಕಾರಣವಾದರೂ ಚಿಂತಿಸದೆ ಜೀವಿಸುವ ತ್ಯಾಗಜೀವಿಗಳು. ಪುರುಷರ ಸಾಧನೆ ಹಿಂದೆ ಹೆಣ್ಣಿನ ತ್ಯಾಗ ಅಡಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲ ಕಾರ್ಯಕ್ರಮಕ್ಕೂ ಹೆಣ್ಣು ಮಕ್ಕಳನ್ನು ಕರೆತರುವ ಮೂಲಕ ಅಡುಗೆ ಮಾಡಲು ಮಾತ್ರ ಹೆಣ್ಣು ಎಂಬ ಮನಸ್ಥಿತಿಯಿಂದ ಹೊರಬರಬೇಕು’ ಎಂದು ಸಲಹೆ ನೀಡಿದರು.
‘ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯ ಬೇರುಗಳು ಇವುಗಳ ನಾಶದಿಂದ ನಮ್ಮ ಸಂಸ್ಕೃತಿಯ ನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಗ್ರಾಮೀಣ ಕ್ರೀಡೆಗಳ ಅರಿವು ಇಂದಿನ ಜನಾಂಗ ಇಲ್ಲದಾಗಿದೆ ಇದು ನಮ್ಮ ಸಾಂಸ್ಕೃತಿಕ ಮರೆಯಾಗುತ್ತಿರುವ ಸೂಚನೆಯಾಗಿದೆ. ಆದ್ದರಿಂದ, ಗ್ರಾಮೀಣ ಮಟ್ಟದಲ್ಲಿರುವ ಸಂಘ ಸಂಸ್ಥೆಗಳು ಸ್ಥಳೀಯ ಕ್ರೀಡೆಗಳನ್ನು ಉತ್ತೇಜಿಸುತ್ತಿರುವುದು ಉತ್ತಮ ಕೆಲಸ’ ಎಂದರು
ನಿವೃತ್ತ ಡಿವೈಎಸ್ಪಿ ಸಿದ್ದಯ್ಯ ಮಾತನಾಡಿದರು.
ಸರ್ಕಾರಿ ಅಭಿಯೋಜಕ ಹನಸೆ ಚಿನ್ನಪ್ಪಗೌಡ, ಮಲ್ನಾಡ್ ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಜೆ.ಟಿ. ವೀರೇಶ್, ಮಲ್ಲಾಡ ಸಂಘದ ಉಪಾಧ್ಯಕ್ಷ ಜಾಗಟೆ ಶಿವಕುಮಾರ್, ಕಾರ್ಯದರ್ಶಿ ಟಿ.ಕೆ. ಮಾಚಯ್ಯ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಮೇಗೌಡ, ಸಮಾಜ ಸೇವಕ ಮುರುಳಿಮೋಹನ್, ಯುವ ರೈತ ಸಂಘದ ಅಧ್ಯಕ್ಷ ಡಿಲಾಕ್ಷ, ಕಾರ್ಯದರ್ಶಿ ಕೀರ್ಕಳ್ಳಿ ಕೀರ್ತಿಕುಮಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.