ಹಾಸನ: ‘ಮುಂದಿನ ವರ್ಷ ಜೂನ್ ತಿಂಗಳಲ್ಲಿ ನಡೆಯುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರೈತ ಸಂಘ ಬೆಂಬಲಿತ ಅಭ್ಯರ್ಥಿಯಾಗಿ ಎಂಜಿನಿಯರಿಂಗ್ ಪದವೀಧರ ಪ್ರಸನ್ನ ಎನ್. ಗೌಡ ಅವರನ್ನುಕಣಕ್ಕೆ ಇಳಿಸಲಾಗುವುದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
‘ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾನೂನು ವಿರೋಧಿಸಿ ಹಲವು ತಿಂಗಳಿನಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ರೈತರ ಪರವಾಗಿ ಮಾತನಾಡಲು ಸಂಸತ್ನಲ್ಲಿ ಯಾರೂ ಇಲ್ಲ. ಜನಪರ, ರೈತ ಪರವಾದ ದನಿ ದೊಡ್ಡದಾಗಬೇಕು. ಜನಾಂದೋಲನಕ್ಕೆ ದನಿಯಾಗುವವರು ಬೇಕಾಗಿದ್ದಾರೆ. ಹಾಗಾಗಿ ಪ್ರಸನ್ನ ಗೌಡ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರೈತ ಪ್ರಸನ್ನ ಅವರು ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕೆರೆ ಉಳಿಸಿ ಅಭಿಯಾನದಲ್ಲಿ ತೊಡಗಿಸಿ ಕೊಂಡು, ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದಾರೆ’ ಎಂದರು.
‘ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಯಲ್ಲಿ ಬೆಂಗಳೂರು ಹೊರತುಪಡಿಸಿ ಇತರೆಡೆ ಸ್ವರಾಜ್ ಇಂಡಿಯಾ ಮೂಲಕ ಸ್ಪರ್ಧಿಸಲಾಗುವುದು. ರೈತ ಸಂಘಗಳನ್ನು ಒಟ್ಟು ಸೇರಿಸಿ ಜನಪರ ರಾಜಕೀಯ ಮಾಡುವ ಗುರಿ ಇದೆ’ ಎಂದು ನುಡಿದರು.
‘ಸರ್ಕಾರದ ನೀತಿಗಳು ರೈತ ಹಾಗೂ ಜನಸಾಮಾನ್ಯರ ಪರವಾಗಿಲ್ಲ. ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಸಮರ್ಥ ವಿರೋಧ ಪಕ್ಷಗಳೇ ಇಲ್ಲ. ಎಲ್ಲರೂ ಬಂಡವಾಳ ನೀತಿಯ ಪೋಷಣೆ ಮಾಡುತ್ತಿದ್ದಾರೆ. ರೈತರ ದೆಹಲಿ ಚಳವಳಿ ಹಿಂದಿನ ಉದ್ದೇಶಕ್ಕೆ ಮನ್ನಣೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ದಲಿತ, ಪ್ರಗತಿ ಪರ ಸಂಘಟನೆಗಳ ಜೊತೆ ಮಾತುಕತೆ ಮಾಡಲಾಗಿದೆ. ಪ್ರಗತಿಪರ ಚಿಂತಕರ ಜತೆಗೂ ಚರ್ಚಿಸಲಾಗಿದೆ. ಕಾರ್ಮಿಕರು, ಯುವ ಜನತೆ, ಮಹಿಳೆಯರು ಹಾಗೂ ಮಕ್ಕಳ ದನಿಯಾಗಿ ಸ್ಪರ್ಧೆ ಮಾಡಲಾಗುವುದು. ಈ ಮೂಲಕ ಸಮುದಾಯದ ಪರ ಚಿಂತನೆಗೆ ಮುನ್ನುಡಿ ಬರೆಯ ಲಾಗುವುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ ಪೊಣಚ್ಚ, ಮುಖಂಡಪ್ರಸನ್ನ, ಇಮ್ರಾನ್ ಖಾನ್, ಜಿಲ್ಲಾ ಘಟಕದ ಅಧ್ಯಕ್ಷ ರಘು ಹೀರಿಸಾವೆ ಹಾಗೂ ಹಾಸನ ತಾಲ್ಲೂಕುಘಟಕದ ಅಧ್ಯಕ್ಷ ಶಾಂತರಾಜ್ ಅರಸು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.