ಸಕಲೇಶಪುರ: ತಾಲ್ಲೂಕಿನ ಗ್ರಾಮೀಣ ಪ್ರದೇಶದ ವೃದ್ಧರು, ಅಂಗವಿಕಲರು ಹಾಗೂ ನಿರ್ಗತಿಕರ ಮನೆ ಬಾಗಿಲಿಗೆ ತಹಶೀಲ್ದಾರ್ ಜೈಕುಮಾರ್ ಭೇಟಿ ನೀಡಿ ಆಹಾರದ ಕಿಟ್ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಕೆಲಸದ ನಿಮಿತ್ತ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭಗಳಲ್ಲಿ ಕಂಡುಬರುವ ಅಸಹಾಯಕರಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ದಿನಸಿ ಕಿಟ್ ನೀಡುತ್ತಿದ್ದಾರೆ.
‘94 (ಸಿ) ಫಲಾನುಭವಿಗಳಿಗೆ ತುರ್ತಾಗಿ ಹಕ್ಕುಪತ್ರ ವಿತರಣೆ ಮಾಡುವ ಸಲುವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತೇನೆ. ಇಂಥ ಸಂದರ್ಭಗಳಲ್ಲಿ ತುಂಬಾ ವಯಸ್ಸಾದ ನಿರ್ಗತಿಕರು, ಅಂಗವಿಕಲರು ಹಾಗೂ ಕಡುಬಡವರನ್ನು ಕಂಡಿದ್ದೇನೆ. ಅವರಿಗೆ ಏನಾದರೂ ಸೇವೆ ಮಾಡಬೇಕು ಎಂಬ ಮನಸ್ಸಾಯಿತು. ಪ್ರತಿ ದಿನ ಹಳ್ಳಿಗೆ ಹೋಗುವಾಗ ಜೀಪಿನಲ್ಲಿ ಆಹಾರದ ಕಿಟ್ಗಳನ್ನು ಇಟ್ಟುಕೊಂಡೇ ಹೋಗುತ್ತೇನೆ’ ಎಂದುತಹಶೀಲ್ದಾರ್ ಎಚ್.ಬಿ. ಜೈಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಅಸಹಾಯಕರ ಮನೆಗೆ ಭೇಟಿ ನೀಡಿ ಕಿಟ್ಗಳನ್ನು ನೀಡುತ್ತೇವೆ. ಇದೇನು ದೊಡ್ಡ ಸೇವೆ ಅಲ್ಲ. ಆದರೆ ನೆರವು ನೀಡುವಾಗ ಖುಷಿಯಾಗುತ್ತದೆ’ ಎಂದು ಅವರು
ಹೇಳಿದರು.
‘ಹಕ್ಕುಪತ್ರ ಪಡೆಯುವುದಕ್ಕೆ ಹತ್ತಾರು ಬಾರಿ ತಾಲ್ಲೂಕು ಕಚೇರಿಗೆ ಅಲೆದಿದ್ದೇವೆ. ಈ ಅಧಿಕಾರಿ ಮನೆ ಬಾಗಿಲಿಗೆ ಹೋಗಿ ಹಕ್ಕುಪತ್ರಗಳನ್ನು ವಿತರಣೆ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳಲ್ಲಿ ಈ ರೀತಿಯ ಮಾನವೀಯ ಮೌಲ್ಯಗಳು ಇದ್ದರೆ ಸಾರ್ವಜನಿಕರಿಗೆ ಸಹಾಯವಾಗುತ್ತದೆ’ ಎಂದು ಕುರುಬತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಅರ್ಜುನ್ ಶುಕ್ರವಾರಸಂತೆ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.