
ಆಲೂರು: ಪಟ್ಟಣದಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯಗಳು ಹಾಗೂ ರೋಗಿಗಳೊಂದಿಗೆ ವೈದ್ಯರ ಸ್ಪಂದನೆ ಉತ್ತಮವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ನೂತನ ಕುಡಿಯುವ ನೀರಿನ ಘಟಕ, ಫೋಟೋಥೆರಫಿ ಮತ್ತು ಹಾಸಿಗೆಗಳಿಗೆ ನೂತನ ದಿಂಬು, ಸೊಳ್ಳೆಪರದೆ ವಿತರಣೆ ಮಾಡಿ ಅವರು ಮಾತನಾಡಿದರು.
‘ಈ ಆಸ್ಪತ್ರೆಯಲ್ಲಿ ಮಕ್ಕಳು ಜನಿಸಿದ ಸಂದರ್ಭದಲ್ಲಿ ಜಾಂಡೀಸ್ ನಿವಾರಣೆಗಾಗಿ ಫೋಟೊಥೆರಫಿ ಚಿಕಿತ್ಸೆ ದೊರಕದೆ ಹಾಸನಕ್ಕೆ ಕಳುಹಿಸಬೇಕಾಗಿತ್ತು. ಈಗ ಇದೆ ಆಸ್ಪತ್ರೆಯಲ್ಲಿ ಸೌಲಭ್ಯ ದೊರಕುವುದರಿಂದ ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.‘
‘ಇತ್ತೀಚೆಗೆ ಮಕ್ಕಳ ತಜ್ಞವೈದ್ಯರು ಮತ್ತು ಅರಿವಳಿಕೆ ತಜ್ಞ ವೈದ್ಯರು ವರ್ಗಾವಣೆಗೊಂಡಿದ್ದಾರೆ. ಖಾಲಿ ಇರುವ ಜಾಗ ತುಂಬಲು ಕೂಡಲೆ ಕ್ರಮ ಕೈಗೊಳ್ಳುತ್ತೇನೆ. 1500 ಲೀಟರ್ ಸಾಮರ್ಥ್ಯವುಳ್ಳ ಶುದ್ಧ ಕುಡಿಯುವ ನೀರು ಘಟಕವನ್ನು ತೆರೆಯಲಾಗಿದ್ದು, ಸಾರ್ವಜನಿಕರು ಉಪಯೋಗಿಸುವ ಸಂದರ್ಭದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ಫಾತಿಮ ಅವರು, ಆಸ್ಪತ್ರೆ ಮುಂಭಾಗ ಮುಖ್ಯಬೀದಿಯಂಚಿನಲ್ಲಿರುವ ಚರಂಡಿಗೆ ಸ್ಲ್ಯಾಬ್ ಹಾಕಿಸಿದರೆ, ಆಸ್ಪತ್ರೆಗೆ ಬರುವ ರೋಗಿಗಳ ವಾಹನಗಳನ್ನು ನಿಲ್ಲಿಸಲು ಅನುಕೂಲವಾಗುತ್ತದೆ ಎಂದು ಶಾಸಕರ ಗಮನ ಸೆಳೆದರು. ಸ್ಥಳದಲ್ಲಿದ್ದ ಪ. ಪಂ. ಮುಖ್ಯಾಧಿಕಾರಿಗೆ ಮಂಜುನಾಥ್ ಅವರಿಗೆ ಕೂಡಲೆ ಸ್ಲ್ಯಾಬ್ ಅಳವಡಿಸಿ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಶಾಸಕರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಳರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ವೈದ್ಯರು, ದಾದಿಯರ ಕರ್ತವ್ಯದ ಬಗ್ಗೆ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.