ADVERTISEMENT

ತಟ್ಟದ ಬಂದ್‌ ಬಿಸಿ; ಬಸ್‌ ಸಂಚಾರ ಆರಂಭ

ಕಾರ್ಮಿಕ ಸಂಘಟನೆಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 14:46 IST
Last Updated 9 ಜನವರಿ 2019, 14:46 IST
ಹಾಸನದಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಹಾಸನದಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.   

ಹಾಸನ: ಎರಡನೇ ದಿನದ ರಾಷ್ಟ್ರವ್ಯಾಪಿ ಬಂದ್ ಗೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂಜಾನೆಯಿಂದಲೇ ಎಂದಿನಂತೆ ಸಾರಿಗೆ ಬಸ್ ಸಂಚಾರ ಇತ್ತು.

ನಗರ ಸಾರಿಗೆ ಸೇರಿ ಜಿಲ್ಲೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಗೆ ಹೋಗುವ ಮತ್ತು ಒಳ ಬರುವ ಬಸ್ ಗಳು ಕಾರ್ಯಾರಂಭ ಮಾಡಿವೆ.

ಆಟೊ ಮತ್ತು ಎಲ್ಲಾ ರೀತಿಯ ಖಾಸಗಿ ವಾಹನಗಳ ಸಂಚಾರ ಯಥಾಸ್ಥಿತಿ ಇದೆ. ಸಣ್ಣ ಹೋಟೆಲ್, ಅಂಗಡಿಗಳು ಬಾಗಿಲು ತೆರದಿದ್ದವು. ಆದರೆ, ಬ್ಯಾಂಕ್‌ಗಳನ್ನು ಬಂದ್‌ ಮಾಡಲಾಗಿತ್ತು.

ADVERTISEMENT

ಶಾಲಾ, ಕಾಲೇಜುಗಳಲ್ಲಿ ಎಂದಿನಂತೆ ಪಾಠ, ಪ್ರವಚನ ನಡೆದವು. ಗ್ರಾಮೀಣ ಭಾಗ ಸೇರಿದಂತೆ ಬಸ್ ಸಂಚಾರ ಉತ್ತಮ ವಾಗಿದ್ದರಿಂದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

ಬೆಳಿಗ್ಗೆ 10 ಗಂಟೆ ಬಳಿಕ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಹೇಮಾವತಿ ಪ್ರತಿಮೆ ಬಳಿಯಿಂದ ಎನ್.ಆರ್.ವೃತ್ತದವರೆಗೆ ಮೆರವಣಿಗೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಕಾರ್ಮಿಕರು, ‘ಸಮಾನ ವೇತನ ನಿಗದಿ ಸೇರಿದಂತೆ ಶ್ರಮಿಕ ವರ್ಗದ ಬೇಡಿಕೆ ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಪ್ರಧಾನಿ ಮೋದಿ ಅವರ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ನಾಲ್ಕೂವರೆ ವರ್ಷಗಳಿಂದಲೂ ಪ್ರಧಾನಿ ಅವರು ಜನ ವಿರೋಧಿ ಆಡಳಿತ ನಡೆಸುತ್ತಿದ್ದು, ಇದು ಹೀಗೇ ಮುಂದುವರಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.