ADVERTISEMENT

ಹೋರಿಗರುಗಳನ್ನು ಸಂತೆಯಲ್ಲೇ ಬಿಟ್ಟು ಹೋದರು!

ಸಂತೆ ಮೈದಾನದಿಂದ ತಾಲ್ಲೂಕು ಕಚೇರಿ ಆವರಣಕ್ಕೆ; ಅಲ್ಲಿಂದ ಮೈಸೂರಿಗೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 2:00 IST
Last Updated 23 ಜನವರಿ 2021, 2:00 IST
ಚನ್ನರಾಯಪಟ್ಟಣದ ತಾಲ್ಲೂಕು ಕಚೇರಿ ಆವರಣಕ್ಕೆ ತಂದುಬಿಡಲಾದ ಜರ್ಸಿ ತಳಿಯ ಹೋರಿಗರುಗಳು
ಚನ್ನರಾಯಪಟ್ಟಣದ ತಾಲ್ಲೂಕು ಕಚೇರಿ ಆವರಣಕ್ಕೆ ತಂದುಬಿಡಲಾದ ಜರ್ಸಿ ತಳಿಯ ಹೋರಿಗರುಗಳು   

ಚನ್ನರಾಯಪಟ್ಟಣ (ಹಾಸನ): ಪಟ್ಟಣದಲ್ಲಿ ಶುಕ್ರವಾರ ನಡೆಯುವ ದನಗಳ ಸಂತೆಯಲ್ಲಿ ಮಾರಲು, ಜರ್ಸಿ ಹೋರಿಗರುಗಳನ್ನು ತಂದಿದ್ದ ರೈತರು, ಖರೀದಿಸುವವರಿಲ್ಲದೇ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ಯಾರೂ ಖರೀದಿಸಲು ಮುಂದೆ ಬರಲಿಲ್ಲ. ಕರುಗಳನ್ನು ತಂದ ರೈತರುಅವುಗಳನ್ನು ವಾಪಸ್‌ ಒಯ್ಯದೇ ಕಟ್ಟಿದ್ದಲ್ಲಿಯೇ ಬಿಟ್ಟು ಹೋಗಿದ್ದರಿಂದ, 32 ಕರುಗಳು ಅನಾಥವಾಗಿ ನಿಂತಿದ್ದವು.

ಬೆಳಿಗ್ಗೆಯಿಂದ ಆಹಾರವಿಲ್ಲದೇ, ಕರುಗಳು ಬಳಲಿದ್ದವು. ನಾಯಿಗಳು ಕಚ್ಚಿ ಸಾಯಿಸುತ್ತವೆ ಎಂಬ ಆತಂಕದಿಂದ ಅವುಗಳನ್ನುವಾಹನದಲ್ಲಿ ತಂದು ತಾಲ್ಲೂಕು ಕಚೇರಿ ಆವರಣದಲ್ಲಿ ಬಿಡಲಾಯಿತು ಎಂದು ಸ್ಥಳೀಯರಾದ ಮಹೇಶ್‌ ತಿಳಿಸಿದರು. ಬಳಿಕ, ಅವುಗಳ‌ನ್ನು ತಾಲ್ಲೂಕು ಆಡಳಿತವು ಮೈಸೂರಿನ ಪಿಂಜರಪೋಳಗೆ ಕಳುಹಿಸುವ ವ್ಯವಸ್ಥೆ ಮಾಡಿತು.

ADVERTISEMENT

‘ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೆ ಸಾಲದು. ರಾಸುಗಳನ್ನು ಸಾಕುವುದಕ್ಕಾಗಿ, ಸರ್ಕಾರವು ಗೋ ಶಾಲೆಗಳನ್ನು ತೆರೆಯಬೇಕಿತ್ತು. ಈ ಬಗ್ಗೆ ಚಿಂತಿಸದೇ ಕಾಯ್ದೆ ತಂದಿದ್ದು ತರವಲ್ಲ. ವಯಸ್ಸಾದ ಗೋವುಗಳನ್ನುರಕ್ಷಿಸುವರು ಯಾರು?’ ಎಂದು ರೈತ ಸಂಘದ ಜಿಲ್ಲಾ ವಕ್ತಾರ ದೊಡ್ಡೇರಿ ಶ್ರೀಕಂಠ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.