ಬೇಲೂರು: ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದ ಕುಟುಂಬವೊಂದು ಮತ್ತೆ ಹಿಂದೂ ಧರ್ಮಕ್ಕೆ ಮರಳಿದೆ.
ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ವಿಶೇಷ ಪೂಜೆ ನಡೆಸುವ ಮೂಲಕ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ತಮ್ಮಯ್ಯ, ಅವರ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಪುನಃ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು.
ಇಲ್ಲಿನ ಲಕ್ಷ್ಮೀಪುರ ಬಡಾವಣೆಯ ವೀರಾಂಜನೇಯಸ್ವಾಮಿ ದೇಗುಲದ ಸಭಾಂಗಣದಲ್ಲಿ ವಿವಿಧ ಹೋಮ ಹವನಗಳನ್ನು ನಡೆಸಿ, ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಎಚ್ಪಿಯ ರಾಜಶೇಖರ್, ‘ಮರಳುಮಾತಿಗೆ ಮಾರುಹೋಗಿ ಮತಾಂತರಗೊಳ್ಳುತ್ತಿರುವುದು ಹೆಚ್ಚು ತ್ತಿದೆ. ಯಾವುದೇ ಧರ್ಮವಾಗಿರಲಿ ಜೀವನ ನಡೆಸುವುದಕ್ಕೆ ತಮ್ಮದೇ ಆದ ಆತ್ಮಬಲ, ದೈಹಿಕ ಬಲ, ಮನಃಶಾಂತಿ ಇಟ್ಟುಕೊಳ್ಳಬೇಕು. ಮತಾಂತರಗೊಳ್ಳು ವುದರಿಂದಲೇ ಸಮಸ್ಯೆ ಬಗೆಹರಿಯ ಲಿದೆ ಎಂಬುದು ತಪ್ಪು ಕಲ್ಪನೆ’ ಎಂದರು.
ತಮ್ಮಯ್ಯ ಮಾತನಾಡಿ, ‘ಕುಟುಂಬದಲ್ಲಿನ ಸಮಸ್ಯೆಯಿಂದಾಗಿ ಕೆಲವರ ಅಭಿಪ್ರಾಯ ಪಡೆದು ಕ್ರಿಶ್ಚಿಯನ್ ಧರ್ಮಕ್ಕೆ ಹೋಗಿದ್ದು ನಿಜ. ಸಮಸ್ಯೆ ಬಗೆಹರಿಯದೆ ಇದ್ದ ಕಾರಣ ನಾನು ಮತ್ತು ಕುಟುಂಬದವರು ಹಿಂದೂ ಧರ್ಮಕ್ಕೆ ಮರಳಿದ್ದೇವೆ. ಹಿಂದೂ ಧರ್ಮದಲ್ಲಿದ್ದಾಗ ನಮ್ಮ ಹಿರಿಯರನ್ನು ಹಾಗೂ ದೇವರನ್ನು ಪೂಜಿಸುತ್ತಿದ್ದೆವು. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತಿತ್ತು. ಹಿರಿಯರ ಧರ್ಮಕಾರ್ಯದಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ಮಾತೃ ಧರ್ಮಕ್ಕೆ ವಾಪಸ್ ಆಗಿದ್ದೇವೆ’ ಎಂದು ಹೇಳಿದರು.
ಪೂಜಾ ಕಾರ್ಯವನ್ನು ಪುರೋಹಿತರಾದ ಪ್ರಶಾಂತ ಭಟ್, ಮಂಜುನಾಥ್, ರವೀಂದ್ರ ರಮೇಶ್ ನೆರವೇರಿಸಿದರು. ಮಾತೃಧರ್ಮಕ್ಕೆ ಮರಳಿದ ತಮ್ಮಯ್ಯ ಕುಟುಂಬಕ್ಕೆ ಸಲಹೆ ನೀಡಿದರು.
ಜಾಗರಣ ವೇದಿಕೆಯ ಸಂಪತ್, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣೇಗೌಡ, ಹಿಂದೂ ಸಮಾಜದ ಪ್ರಮುಖ ಮುರಳಿ, ಕಾಫಿ ಬೆಳೆಗಾರ ಮಂಜುನಾಥ, ಬಜರಂಗದಳದ ತಾಲ್ಲೂಕು ಘಟಕದ ಸಂಚಾಲಕ ಮಂಜುನಾಥ, ವೀರಾಂಜನೇಯ ಸ್ವಾಮಿ ದೇಗುಲದ ಅಧ್ಯಕ್ಷ ಬಿ.ಕೆ.ಮೋಹನ್, ಪ್ರದೀಪ್, ಅನಿಲ್, ರಾಧಾಕೃಷ್ಣ ಮತ್ತು ತಮ್ಮಯ್ಯ ಕುಟುಂಬದ ತಮ್ಮಣ್ಣಸ್ವಾಮಿ, ಶಶಿಕಲಾ, ಶಿವಕುಮಾರ್, ಯೋಗೇಶ್, ಸಚಿನ್, ಸುಧಾ, ಅರುಣಾಕ್ಷಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.