ಸಕಲೇಶಪುರ: ಕಾಡಾನೆಯ ದಂತ, ಮೂಳೆ ಹಾಗೂ ದವಡೆ ಕಳವು ಮಾಡಿದ ಆರೋಪದ ಮೇಲೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಸ್ಸಾಂ ರಾಜ್ಯದ ಮೂವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
ಕಾಡಮನೆ ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುವ ಅಸ್ಸಾಂನ ಗಂಗಾ ಪ್ರಸಾದ್, ಸೀಲಾಸ್ ಬರ್ಲ್, ಎ. ಉಣಿಲ್ ಬಂಧಿತ ಆರೋಪಿಗಳು.
ಕಾಡಿನಲ್ಲಿ ಮೃತ ಆನೆಯ ದಂತ ಹಾಗೂ ಮೂಳೆಯನ್ನು ಕದ್ದುಕೊಂಡು ಬರುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ದಂತ, ದವಡೆ ಹಾಗೂ ಮೂಳೆಯನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಡಿದ ದಂತವನ್ನು ಮಾರಾಟ ಮಾಡುವುದಕ್ಕಾಗಿ ಹೊತ್ತೊಯ್ಯುತ್ತರಿರುವಾಗಿ ಹೇಳಿದ್ದಾರೆ.
ಅಸ್ಸಾಂ ರಾಜ್ಯದಿಂದ ಕಾಡಮನೆ ಟೀ ಎಸ್ಟೇಟ್ನಲ್ಲಿ ಹಲವು ವರ್ಷಗಳಿಂದ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿ ಮೇಲೆ ವಲಯ ಅರಣ್ಯ ಅಧಿಕಾರಿ ಪಿ.ಸಿ. ರವೀಂದ್ರ, ಉಪ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ್, ಅರಣ್ಯ ರಕ್ಷಕ ಎಸ್.ಜೆ. ಸುಂದರೇಶ್, ಮಹದೇವ್, ಅರಣ್ಯ ಸಂಚಾರಿ ದಳದ ವಲಯ ಅರಣ್ಯ ಅಧಿಕಾರಿ ಗಿರೀಶ್, ಪಿಎಸ್ಐ ಎಸ್. ಸುರೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಇವರ ಹಿಂದೆ ದಂಧೆಗೆ ಸಂಬಂಧಿಸಿದ ಪ್ರಮುಖ ಆರೋಪಿಗಳ ಪತ್ತೆಗೆ ಉಪ ವಲಯ ಅರಣ್ಯ ಅಧಿಕಾರಿ ಸಿವರಾಂ ಬಾಬು ನೇತೃತ್ವದಲ್ಲಿ ಎಸಿಎಫ್ ಲಿಂಗರಾಜ್, ಆರ್ಎಫ್ಓ ರವೀಂದ್ರ ಹಾಗೂ ತಂಡ ಮುಂದಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.