ಶ್ರವಣಬೆಳಗೊಳ: ಕನಸು ಕಾಣುವ ಹರೆಯದ ವಯಸ್ಸಿನಲ್ಲಿ ಸುಂದರವಾದ ದೇಶವನ್ನು ಕಟ್ಟುವ ಅಛಲ ಶಕ್ತಿ ವಿದ್ಯಾರ್ಥಿಗಳಲ್ಲಿರುತ್ತದೆ ಎಂದು ಹಾಸನದ ಹಮ್ ಶೈನ್ ಎಲೆಕ್ಟ್ರಾನಿಕ್ಸ್ ಮತ್ತು ಎನರ್ಜಿ ಸಿಸ್ಟಮ್ನ ಮಾಲೀಕ ಎಚ್.ಜೆ.ಹಂಸರಾಜ್ ಹೇಳಿದರು.
ಪಟ್ಟಣದ ಗೊಮ್ಮಟನಗರದ ಬಾಹುಬಲಿ ಎಂನಿಜಿಯರಿಂಗ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಆವಿಷ್ಕಾರ 2019ರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಗಳವಾರ ಮಾತನಾಡಿದರು.
‘ಪ್ರಪಂಚದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನ, ಗೌರವ ಇದೆ. ಹಾಗಾಗಿಯೇ ‘ಇಂಡಿಯನ್ ಬ್ರೈನ್ ಈಸ್ ಬೆಸ್ಟ್ ಬ್ರೈನ್’ ಎಂದು ಹೇಳುತ್ತಾ ಅನೇಕ ಸಂಗತಿಗಳಲ್ಲಿ ಭಾರತೀಯರ ಆಲೋಚನಾ ಶಕ್ತಿ ಹೊರ ದೇಶದವರಿಗಿಂತ ಹೆಚ್ಚಿಗೆ ಇದ್ದು, ಎಲ್ಲೆಡೆಯಿಂದ ಪ್ರಶಂಸೆಗೆ ಒಳಗಾಗುತ್ತಿದ್ದಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಗೋಮಟೇಶ್ ಎಂ.ರಾವಣ್ಣವರ್ ಮಾತನಾಡಿ, ‘ಕರ್ನಾಟಕದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 15 ಸಾವಿರ ಪ್ರಾಜೆಕ್ಟ್ಗಳು ಅನಾವರಣಗೊಳ್ಳುತ್ತಿವೆ. ಅದರಿಂದ ಈ ದೇಶದ ಬಡವರಿಗೆ, ಕೃಷಿಕರಿಗೆ, ಸೈನಿಕರಿಗೆ ಪ್ರಯೋಜನವಾಗುವುದರ ಬಗ್ಗೆ ಯೋಚಿಸಬೇಕಾಗಿದೆ. ಪ್ರಸಕ್ತ ಸಾಲಿನ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ ಕಮ್ಯುನಿಕೇಷನ್, ಇನ್ಫಾರ್ಮೇಷನ್ ಅಂಡ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳಿಂದ 47 ಪ್ರಾಜೆಕ್ಟ್ಗಳು ಅನಾವರಣಗೊಂಡಿವೆ. ಅವುಗಳಲ್ಲಿ 4 ಪ್ರಾಜೆಕ್ಟ್ಗಳಿಗೆ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ಆರ್ಥಿಕ ನೆರವು ದೊರಕಿದ್ದು, ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಪ್ರದರ್ಶನಕ್ಕೆ ಆಯ್ಕೆ ಆಗಿವೆ ಎಂದು ತಿಳಿಸಿದರು.
ಎಂಜಿನಿಯರಿಂಗ್ನಲ್ಲಿ ಥಿಯರಿಗಿಂತ ಪ್ರಾಯೋಗಿಕಕ್ಕೆ ಮುಖ್ಯವಾಗಿದ್ದರಿಂದ ವಿಶ್ವೇಶ್ವರಯ್ಯ ಟೆಕ್ನಾಲಜಿ ವಿಶ್ವವಿದ್ಯಾಲಯವು ಇನ್ನು ಮುಂದೆ 7 ಮತ್ತು 8ನೇ ಸೆಮಿಸ್ಟರ್ನಲ್ಲಿಯೇ 2 ಪ್ರಾಜೆಕ್ಟ್ಗಳಿಗೆ ಅನುಮತಿ ನೀಡಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಪರಿವರ್ತಿಸಿಕೊಂಡು ತಮ್ಮಲ್ಲಿರುವ ಕೌಶಲವನ್ನು ಹೊರಹಾಕಿ ದೇಶದ ಅಭಿವೃದ್ಧಿಗೆ ಮುಂದಾಗುವಂತೆ ಕಿವಿಮಾತು ಹೇಳಿದರು.
‘ಆವಿಷ್ಕಾರ – 19 ಪ್ರಾಜೆಕ್ಟ್ ಎಕ್ಸಿಬಿಷನ್ ಪ್ರೊಸಿಡಿಂಗ್ಸ್ ದಾಖಲೆ’ಯ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರೊ.ನಾಗರಾಜ್, ವಿದ್ಯಾರ್ಥಿ ತತ್ವಾ, ಪೂಜಾ, ಶೀತಲ್ ಜೈನ್, ದೀಕ್ಷಾ, ಅಮೋಘ್, ಹರ್ಷಿತಾ ಬಿ.ಕೆ ಇದ್ದರು.
ವಿದ್ಯಾರ್ಥಿಗಳು ತಯಾರಿಸಿರುವ ಪ್ರಾಜೆಕ್ಟ್ಗಳ ಬಗ್ಗೆ ಉಪನ್ಯಾಸಕಿ ಸವಿತಾ ಜಿ.ರಾವಣ್ಣವರ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.