ADVERTISEMENT

ಅರಕಲಗೂಡು: ಶುಶ್ರೂಷಕರ ಕೊರತೆ ನಡುವೆಯೂ ರೋಗಿಗಳಿಗೆ ಚಿಕಿತ್ಸೆ

₹15 ಲಕ್ಷ ವೆಚ್ಚದ ಜೀವರಕ್ಷಾ ವ್ಯವಸ್ಥೆಯ ಆಂಬುಲೆನ್ಸ್‌ ವಾಹನ ಸೌಲಭ್ಯ

ಜಿ.ಚಂದ್ರಶೇಖರ್‌
Published 4 ಫೆಬ್ರುವರಿ 2022, 3:25 IST
Last Updated 4 ಫೆಬ್ರುವರಿ 2022, 3:25 IST
ಅರಕಲಗೂಡು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ (ಎಡಚಿತ್ರ). ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕ
ಅರಕಲಗೂಡು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ (ಎಡಚಿತ್ರ). ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕ   

ಅರಕಲಗೂಡು: ಕೋವಿಡ್ ಮೊದಲ ಮತ್ತು ಎರಡನೇ ಅಲೆ ಯಶಸ್ವಿಯಾಗಿ ಎದುರಿಸಿದ್ದ ತಾಲ್ಲೂಕು ಆರೋಗ್ಯ ಇಲಾಖೆ, ಮೂರನೇ ಅಲೆ ಎದುರಿಸಲು ಸನ್ನದ್ಧವಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ.

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 30 ಹಾಸಿಗೆ, ಏಳು ವೆಂಟಿಲೇಟರ್‌ಹಾಗೂ ಆಮ್ಲಜನಕ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದರೆ ಹಾಸಿಗೆಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ವ್ಯವಸ್ಥೆ ಸಹ ಮಾಡಲಾಗಿದೆ.

ರೋಗಿಗಳ ಜೀವ ಉಳಿಸಲು ₹1.52 ಕೋಟಿ ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾಘಟಕ ಸ್ಥಾಪಿಸಲಾಗಿದೆ. ನಿತ್ಯ 500 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯಹೊಂದಿದ್ದು, ಪ್ರತಿ ಹಾಸಿಗೆಗೆ ನೇರವಾಗಿ ಆಮ್ಲಜನಕ ಪೂರೈಕೆ ಆಗಲಿದೆ. ಹೀಗಾಗಿ ಪ್ರಾಣ ವಾಯುವಿನ ಕೊರತೆ ದೂರವಾಗಿದೆ. ವಿದ್ಯುತ್ ತೊಂದರೆ ನಿವಾರಿಸಲು ಜನರೇಟರ್ ಸಹ ಅಳವಡಿಸಲಾಗಿದೆ.‌

ADVERTISEMENT

3ನೇ ಅಲೆ ಎದುರಿಸಲು ₹1.30 ಕೋಟಿ ವೆಚ್ಚದಲ್ಲಿ 20 ಹಾಸಿಗೆಗಳ ತುರ್ತು ನಿಗಾ ಘಟಕ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದ್ದು, ಎಲ್ಲಾ ವಿಭಾಗ ಗಳಲ್ಲಿ 12 ತಜ್ಞ ವೈದ್ಯರು ಇದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಶುಶ್ರೂಷಕರಕೊರತೆ ಇದೆ. ಇದರಿಂದ ರೋಗಿಗಳಿಗೆ ಸರಿಯಾದ ಸೇವೆ ದೊರಕುತ್ತಿಲ್ಲ ಹಾಗೂ ಸ್ವಚ್ಛತೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪ ಇದೆ. ಅಲ್ಲದೇ ಆಸ್ಪತ್ರೆ ಆವರಣದಲ್ಲಿದ್ದ ಜನೌಷಧಿ ಕೇಂದ್ರ ಮುಚ್ಚಿರುವುದರಿಂದ ಬಡ ರೋಗಿಗಳಿಗೆ ತೊಂದರೆ ಯಾಗಿದೆ. ಇದನ್ನು ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

4 ಆಂಬುಲೆನ್ಸ್ ಪೈಕಿ ಒಂದು ಕೋವಿಡ್ ರೋಗಿಗಳಿಗೆ ಮೀಸಲಿರಿಸ ಲಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೆರವಾಗಲು ಆರೋಗ್ಯ ಇಲಾಖೆ ನೀಡಿರುವ ₹15 ಲಕ್ಷ ವೆಚ್ಚದ ಜೀವರಕ್ಷಾ ವ್ಯವಸ್ಥೆ ಅಳವಡಿಸಿರುವ ಆಂಬುಲೆನ್ಸ್ ವಾಹನ ಸೌಲಭ್ಯವಿದೆ.

‘ಆಸ್ಪತ್ರೆಯಲ್ಲಿ 20 ಶುಶ್ರೂಷಕ ಹುದ್ದೆಗಳ ಪೈಕಿ 4 ಖಾಲಿ ಇವೆ. ತುರ್ತು ನಿಗಾ ಘಟಕ ವಿಸ್ತರಣೆಯಾಗುತ್ತಿದ್ದು, ಶುಶ್ರೂಷಕರನ್ನು ನೇಮಿಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಔಷಧಗಳ ಕೊರತೆ ಸದ್ಯಕ್ಕೆ ಇಲ್ಲ. ಕೋವಿಡ್ ಪೀಡಿತರಿಗೆ ನೆರವಾಗಲು ವೆಂಟಿಲೇಟರ್ ಸೇರಿದಂತೆ ಅಗತ್ಯ ಉಪಕರಣಗಳನ್ನು ದಾನಿಗಳು ಕೊಡುಗೆಯಾಗಿ ನೀಡಿದ್ದಾರೆ’ ಎಂದು ವೈದ್ಯಾಧಿಕಾರಿ ದೀಪಕ್ ಹೇಳಿದರು.

‘ಕೋವಿಡ್ ರೋಗಿಗಳನ್ನು ಗುರುತಿಸಿ ಅವರಿಗೆ ಅಗತ್ಯ ಚಿಕಿತ್ಸೆ ದೊರಕಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲಿ ರ್‍ಯಾಪಿಡ್‌ ರೆಸ್ಪಾನ್ಸ್ ಟೀಂಗಳನ್ನು ರಚಿಸಲಾಗಿದೆ.ತಾಲ್ಲೂಕು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ತಂಡವೂ ಇದೆ.ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ನೆರವಾಗುವ ಕಿಟ್ ಒದಗಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡತಿಳಿಸಿದರು.

‘ತಾಲ್ಲೂಕಿನ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇದ್ದಾರೆ. ಕೊಣನೂರು ಸಮುದಾಯ ಕೇಂದ್ರದಲ್ಲಿನಾಲ್ಕು ವೈದ್ಯ ಹುದ್ದೆಗಳು ಖಾಲಿ ಇದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರುಪಾಳಿ ಪ್ರಕಾರ ನಿತ್ಯ ಕಾರ್ಯ ನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

***

ಪಟ್ಟಣದ ಆಸ್ಪತ್ರೆ ಯಲ್ಲಿ ಉತ್ತಮ ಚಿಕಿತ್ಸೆ ನೀಡಿದ ಪರಿಣಾಮ ಗುಣಮುಖನಾದೆ. ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರಕುತ್ತಿದೆ.

–ಕೆ.ಸಿ.ಲೋಕೇಶ್, ಅರಕಲಗೂಡು ನಿವಾಸಿ

***

ಅಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಜನೌಷಧಿ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಳ್ಳಬೇಕು.

–ಶಂಕರಯ್ಯ, ವಕೀಲ

***

ಈವರೆಗೆ 1,247 ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ದೊರಕುತ್ತಿದೆ.

–ಡಾ. ದೀಪಕ್, ಆಸ್ಪತ್ರೆ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.