ADVERTISEMENT

ವ್ಯಾಪಾರ ವಹಿವಾಟು ಸ್ಥಗಿತ

ಪೌರತ್ವ (ತಿದ್ದುಪಡಿ) ಕಾಯಿದೆ ಜಾರಿಗೆ ಮುಸ್ಲಿಂ ಒಕ್ಕೂಟ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 14:53 IST
Last Updated 18 ಡಿಸೆಂಬರ್ 2019, 14:53 IST
ಹಾಸನದ ವಲ್ಲಭಬಾಯ್‌ ರಸ್ತೆಯಲ್ಲಿ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ.
ಹಾಸನದ ವಲ್ಲಭಬಾಯ್‌ ರಸ್ತೆಯಲ್ಲಿ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ.   

‌ ಹಾಸನ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ (ತಿದ್ದುಪಡಿ) ಕಾಯಿದೆ ತಿದ್ದುಪಡಿಯನ್ನು ಖಂಡಿಸಿ ಬುಧವಾರ ಮುಸ್ಲಿಂ ಹಿತರಕ್ಷಣಾ ಒಕ್ಕೂಟ ಕರೆ ನೀಡಿದ್ದ ಬಂದ್‌ಗೆ ಮುಸ್ಲಿಂ ಸಮುದಾಯದವರು ಬುಧವಾರ ಸ್ವಯಂ ಪ್ರೇರಿತವಾಗಿ ಅಂಗಡಿಗಳ ಬಾಗಿಲು ಮುಚ್ಚಿ ಬೆಂಬಲ ಸೂಚಿಸಿದರು.

ನಗರದ ವಲ್ಲಭಭಾಯಿ ರಸ್ತೆ, ಹಳೆ ಮಟನ್‌ ಮಾರುಕಟ್ಟೆ ರಸ್ತೆ, ಚಿಪ್ಪಿನ ಕಟ್ಟೆ, ಪೆನ್ಷನ್‌ ಮೊಹಲ್ಲಾದಲ್ಲಿ ವರ್ತಕರು ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನದವರೆಗೆಸ್ಥಗಿತಗೊಳಿಸಿದ್ದರು.

ಅಮಿರ್‌ ಹಸನ್‌ ಕಾಂಪ್ಲೆಕ್ಸ್‌ ಮೈದಾನದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ‌ನಗರದ 50 ಮಸೀದಿಯ ಇಮಾಮ್‌ಗಳು ಪಾಲ್ಗೊಂಡು, ಕೂಡಲೇ ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ಒಕ್ಕೂಟದ ಅಧ್ಯಕ್ಷ ನಾಸೀರ್‌ ಹುಸೇನ್‌ ರೆಜ್ಜಿ ಮಾತನಾಡಿ, ‘ದೇಶದಲ್ಲಿ ಸಂವಿಧಾನವೇ ಮುಖ್ಯ. ಯಾವುದೇ ಪಕ್ಷದ ಸರ್ಕಾರ ಇರಲಿ ಆಳುವ ಪಕ್ಷಗಳು ಎಲ್ಲಾ ಧರ್ಮದವರನ್ನು ಒಂದೇ ರೀತಿ ನೋಡಬೇಕು. ಧರ್ಮದ ಹೆಸರಿನಲ್ಲಿ ಒಡೆದು ಆಳುವ ನೀತಿ ಅನುಸರಿಸಬಾರದು. ನಾವೆಲ್ಲರೂ ಭಾರತೀಯರು. ತಾಯಿಯನ್ನ ಪ್ರೀತಿಸುವಷ್ಟೇ ಜನ್ಮ ಭೂಮಿಯನ್ನು ಪ್ರೀತಿಸುತ್ತೇವೆ’ ಎಂದರು.

‘ಬೇರೆ ಕಾನೂನುಗಳನ್ನು ಮುಸ್ಲಿಂ ಸಮುದಾಯದ ಮೇಲೆ ಏರಿ ದುರ್ಬಲ ಮಾಡಲು ಹೊರಟಿರುವುದು ಸರಿಯಲ್ಲ. ಹಾಗಾಗಿ ಈ ಕಾಯ್ದೆಯನ್ನು ವಿರೋಧಿಸುತ್ತೇವೆ’ ಎಂದರು.

ಧಾರ್ಮಿಕ ಗುರುಗಳಾದ ಮುಫ್ತಿ, ಜುಬೇರ್‌ ಅಹಮದ್‌, ಫಾರೂಕ್‌, ಸೈಯದ್‌ ತಾಜ್‌, ಹೈದರಾಲಿ ಖಾನ್‌, ಮಹಮದ್‌ ಅನ್ಸರ್‌ ಸಾಹೇಬ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.