ADVERTISEMENT

ಪ್ರಥಮ ಬಾರಿಗೆ ಹಳೇಬೀಡಿಗೆ ನೀರು ಪೂರೈಕೆ ಮಾಡಿದ ಟ್ಯಾಂಕ್ ನೆಲಸಮ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 12:35 IST
Last Updated 12 ಜುಲೈ 2023, 12:35 IST
ಹಳೇಬೀಡಿನ ಅಯ್ಯಪ್ಪ ಸ್ವಾಮಿ ದೇವಾಲಯ ಪಕ್ಕದಲ್ಲಿದ್ದ ಶತಮಾನದ ಅಂಚಿನಲ್ಲಿದ್ದ ನೀರಿನ ಟ್ಯಾಂಕ್ ಅನ್ನು ಬುಧವಾರ ನೆಲಸಮ ಗೊಳಿಸಲಾಯಿತು
ಹಳೇಬೀಡಿನ ಅಯ್ಯಪ್ಪ ಸ್ವಾಮಿ ದೇವಾಲಯ ಪಕ್ಕದಲ್ಲಿದ್ದ ಶತಮಾನದ ಅಂಚಿನಲ್ಲಿದ್ದ ನೀರಿನ ಟ್ಯಾಂಕ್ ಅನ್ನು ಬುಧವಾರ ನೆಲಸಮ ಗೊಳಿಸಲಾಯಿತು   

ಹಳೇಬೀಡು: ಹತ್ತಾರು ವರ್ಷ ಹಳೇಬೀಡು ನಾಗರಿಕರಿಗೆ ನೀರು ಪೂರೈಕೆ ಮಾಡಿದ್ದ ಅಯ್ಯಪ್ಪಸ್ವಾಮಿ ದೇವಾಲಯಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಇತಿಹಾಸದ ಪುಟ ಸೇರಿದೆ.

ಸುಮಾರು 80 ವರ್ಷದ ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ್ದ ಟ್ಯಾಂಕ್ ಅನ್ನು ಬುಧವಾರ ನೆಲಸಮಗೊಳಿಸಲಾಯಿತು. ಕಲ್ಲಿನ ಕಟ್ಟಡ ಜೆಸಿಬಿ ಯಂತ್ರವನ್ನು ನಡುಗಿಸುವಂತೆ ಗಟ್ಟಿಯಾಗಿತ್ತು. ಟ್ಯಾಂಕ್ ನಿರ್ಮಾಣದಲ್ಲಿ ಗುಣಮಟ್ಟದ ಕಾಮಗಾರಿ ನಡೆದಿದೆ. ಈಗ ಇಷ್ಟ ಗಟ್ಟಿ ಮುಟ್ಟದ ಕಟ್ಟಡ ನಿರ್ಮಾಣ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದರು.

2.5 ಅಡಿಗಿಂತ ದಪ್ಪದಾದ ಗೋಡೆ ನಿರ್ಮಿಸಲಾಗಿತ್ತು. ದಪ್ಪ ಕಲ್ಲುಗಳ ಜೋಡಣೆ ಮಾಡಿ ಗೋಡೆ ಕಟ್ಟಲಾಗಿದೆ. ಪುರಾತತನ ಕಾಲದ ಟ್ಯಾಂಕ್ ಶತಮಾನ ಕಂಡಿದೆ ಎಂದು ಕೆಲವು ಹೇಳಿದರು. ಹಿರಿಯರು ಟ್ಯಾಂಕ್ ನಿರ್ಮಾಣವಾಗಿ 80 ರಿಂದ 90 ವರ್ಷ ಆಗಿರಬಹುದು ಎಂದರು. ಟ್ಯಾಂಕ್ ನಿರ್ಮಾಣವಾಗಿರುವ ಕುರಿತು ನಿಖರವಾದ ಮಾಹಿತಿ ಅಲ್ಲ. ಟ್ಯಾಂಕ್ ಶಿಥಿಲವಾಗಿದೆ, ಸೋರಿಕೆಯಾಗುತ್ತಿದೆ ಎಂದು ಹತ್ತು ವರ್ಷದಿಂದ ಟ್ಯಾಂಕಿನಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು.

ADVERTISEMENT

ಹಳೇಬೀಡಿಗೆ ಪ್ರಪ್ರಥಮ ಬಾರಿಗೆ ನಲ್ಲಿಗಳ ಮುಖಾಂತರ ಈ ಟ್ಯಾಂಕಿನಿಂದ ನೀರು ಪೂರೈಕೆ ಮಾಡಲಾಗಿದೆ. ನಾವು ಬಾಲ್ಯದಲ್ಲಿ ಶಾಲೆಗೆ ಹೋಗುತ್ತಿದ್ದಾಗ ಟ್ಯಾಂಕ್ ನಿರ್ಮಾಣ ಕಾರ್ಯ ನಡೆದಿದ್ದನ್ನು ಕಂಡಿದ್ದವು. 60ರಿಂದ 70 ವರ್ಷ ಟ್ಯಾಂಕ್ ಬಳಕೆ ಆಗಿದೆ. ಟ್ಯಾಂಕ್ ತೆರವು ಮಾಡುವುದನ್ನು ನೋಡಿದಾಗ ಕಣ್ಣಲ್ಲಿ ನೀರು ಬಂತು. ಸುರಕ್ಷತೆಗಾಗಿ ಹಳೆಯ ಟ್ಯಾಂಕ್ ತೆರವು ಮಾಡುವುದು ಅನಿವಾರ್ಯ ಎಂದು ಎಂದು 90ರ ಪ್ರಾಯದ ಕಲ್ಮಠ ಬೀದಿಯ ಬಸವಣ್ಣ ಹೇಳಿದರು.

ಅಯ್ಯಪ್ಪ ಸ್ವಾಮಿ ದೇವಾಲಯ ಪಕ್ಕದ ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿತ್ತು. ಹಳೆಯದಾಗಿರುವುದರಿಂದ ಅಪಾಯ ಹೆಚ್ಚಾಗಿದೆ ಎಂದು ಟ್ಯಾಂಕ್ ತೆರವು ಮಾಡಲಾಯಿತು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಂ.ಸುರೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.