ಸಕಲೇಶಪುರ: ತಾಲ್ಲೂಕಿನ ಗುರ್ಜಾನಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಆಗಿದೆ.
ಗ್ರಾಮದ ರೈತ ಎಚ್.ಎಸ್. ಮಹೇಶ್ ಅವರ ಕಾಫಿ ತೋಟಕ್ಕೆ ನುಗ್ಗಿರುವ ಆನೆಗಳು ಫಸಲು ನೀಡುತ್ತಿರುವ ಸುಮಾರು 80ಕ್ಕೂ ಹೆಚ್ಚು ಅಡಿಕೆ ಮರಗಳು, 40ಕ್ಕೂ ಹೆಚ್ಚು ಕಾಫಿ ಗಿಡಗಳು, ಸುಮಾರು 30ಕ್ಕೂ ಹೆಚ್ಚು ಏಲಕ್ಕಿ ಗಿಡಗಳನ್ನು ತಿಂದು ತುಳಿದು ಹಾಳು ಮಾಡಿವೆ. ಕುಡಿಯುವ ನೀರಿನ ಪೈಪ್ಲೈನ್ಗೆ ಅಳವಡಿಸಿರುವ 20 ಅಡಿ ಉದ್ದದ 40ಕ್ಕೂ ಹೆಚ್ಚು ಪೈಪ್ಗಳನ್ನು ತುಳಿದು ಪುಡಿ ಮಾಡಿವೆ.
ವಾರದಿಂದ ನಿರಂತರವಾಗಿ ಇವರ ತೋಟದಲ್ಲಿಯೇ ಬೀಡುಬಿಟ್ಟಿರುವ ಆನೆಗಳಿಂದಾಗಿ ತೋಟದಲ್ಲಿ ಕೆಲಸ ಮಾಡುವುದಕ್ಕೆ ಕಾರ್ಮಿಕರು ಬರುತ್ತಿಲ್ಲ. ಕೊಯ್ಲಿಗೆ ಬಂದಿರುವ ಕಾಳು ಮೆಣಸು ಕೊಯ್ಲು ಮಾಡುವುದಕ್ಕೆ, ತೋಟಕ್ಕೆ ನೀರು ಹಾಯಿಸುವುದಕ್ಕೆ ಸಮಸ್ಯೆ ಉಂಟಾಗಿದೆ. ಆನೆಗಳಿಂದ ಜೀವ ಭಯ ಉಂಟಾಗಿದೆ ಎಂದು ರೈತ ಮಹೇಶ್ ಅಳಲು ತೋಡಿಕೊಂಡರು.
ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಕಾಡಾನೆಯಿಂದ ಬೆಳೆ ಹಾನಿ ನಷ್ಟ ಪರೀಶಿಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.