ಹೆತ್ತೂರು: ಹೋಬಳಿಯ ನಿಡಿಗೆರೆ ಅರಣ್ಯದಲ್ಲಿ ‘ಸೀಗೆ’ ಹೆಸರಿನ ಒಂಟಿ ಸಲಗವನ್ನು ಅರಣ್ಯ ಇಲಾಖೆ ತಂಡ ಸೆರೆ ಹಿಡಿದಿದೆ.
ಶನಿವಾರ ಏಳು ಸಾಕಾನೆಗಳೊಂದಿಗೆ ಸಮೀಪದ ಹಳ್ಳಿಬಯಲು ಗ್ರಾಮದಲ್ಲಿ ಸೆರೆ ಹಿಡಿಯುವ ಕಾರ್ಯಾಚರಣೆ ‘ಆಪರೇಷನ್ ಎಲಿಫೆಂಟ್’ ಆರಂಭಿಸಲಾಗಿತ್ತು. ಆದರೆ ‘ಸೀಗೆ’ ದಟ್ಟ ಕಾಡಿನೊಳಗೆ ಸೇರಿಕೊಂಡಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಭಾನುವಾರ ಬೆಳಿಗ್ಗೆ ‘ಸೀಗೆ’ಯನ್ನು ಪತ್ತೆ ಮಾಡಿದರು.
ನಿಡಿಗೆರೆ ಅರಣ್ಯ ಪ್ರದೇಶದಲ್ಲಿ ‘ಸೀಗೆ’ ಇರುವುದನ್ನು ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ತಂಡ, ಬಿಕ್ಕೋಡು ಬಳಿಯಿರುವ ತಾತ್ಕಾಲಿಕ ಶಿಬಿರದಿಂದ ಲಾರಿಗಳ ಮೂಲಕ ನಿಡಿಗೆರೆ ಅರಣ್ಯ ಪ್ರದೇಶಕ್ಕೆ ಸಾಕಾನೆಗಳನ್ನು ಸ್ಥಳಾಂತರ ಮಾಡಿ, ಕಾರ್ಯಾಚರಣೆ ಆರಂಭಿಸಿತು. ಮಧ್ಯಾಹ್ನ ವೈದ್ಯರು ‘ಸೀಗೆ’ಗೆ ಅರಿವಳಿಕೆ ಚುಚ್ಚುಮದ್ದು ನೀಡಿದರು. ಡಾಟ್ ಚುಚ್ಚಿಕೊಂಡ ನಂತರವೂ ಕಿ.ಮೀ.ಗಟ್ಟಲೆ ಓಡಿದ ‘ಸೀಗೆ’, ಕೊನೆಗೆ ಪ್ರಜ್ಞೆತಪ್ಪಿ ಬಿತ್ತು. ಅದನ್ನು ಆರೈಕೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ, ಹಗ್ಗದಿಂದ ಬಂಧಿಸಿದರು. ಪ್ರಜ್ಞೆ ಮರಳಿದ ನಂತರ ಸ್ಥಳಾಂತರಿಸಿದರು.
‘ಅಭಿಮನ್ಯು’ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ‘ಹರ್ಷ’, ‘ಪ್ರಶಾಂತ’, ‘ಕರ್ನಾಟಕ ಭೀಮ’, ‘ಮಹೇಂದ್ರ’, ‘ಧನಂಜಯ’, ‘ಅಶ್ವತ್ಥಾಮ’ ಸಾಕಾನೆಗಳು ಭಾಗವಹಿಸಿದ್ದವು.
ಸೆರೆಯಾದ ‘ಸೀಗೆ’ ಈ ಮೊದಲು ಇಬ್ಬರನ್ನು ಬಲಿ ಪಡೆದಿದ್ದು, ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.