ಹಾಸನ: ನಗರದ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಮುಂಭಾಗದಲ್ಲಿ ದೇವಿಯ ಪ್ರತಿರೂಪ ನಿರ್ಮಿಸಿ ವಿಶೇಷಪೂಜೆ ನಡೆಸುವುದಕ್ಕೆ, ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಖಾರಿ ಬಿ.ಎ. ಜಗದೀಶ್ ತಡೆ ನೀಡಿದ್ದಾರೆ.
ದೇವಾಲಯದ ಆರ್ಚಕರೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಅವರು ಈ ನಿರ್ಧಾರವನ್ನು ಪ್ರಕಟಿಸಿದರು.
‘ಹಿಂದಿನಿಂದಲೂ ಗರ್ಭಗುಡಿ ಮುಂದೆ ಪೂಜೆ ಮಾಡುವ ಸಂಪ್ರದಾಯವಿದೆ ಎಂದು ಅರ್ಚಕರು ಹೇಳಿದರು. ಆದರೆ, ಅದಕ್ಕೆ ವಿರೋಧ ವ್ಯಕ್ತವಾಗಿರುವುದರಿಂದ ಪೂಜೆ ನಡೆಸದಂತೆ ಸೂಚಿಸಲಾಗಿದೆ. ಸಂಪ್ರದಾಯಕ್ಕೆ ಧಕ್ಕೆ ಬರುವ ಹಾಗೂ ಭಕ್ತ ವಲಯವನ್ನು ಘಾಸಿಗೊಳಿಸುವ ಪೂಜೆ ನಡೆಯುವುದಿಲ್ಲ’ ಎಂದು ಜಗದೀಶ್ ಸ್ಪಷ್ಟಪಡಿಸಿದರು.
ವರ್ಷಕ್ಕೆ ಒಂದು ಬಾರಿ ಅಶ್ವಯುಜ ಮಾಸದ ಹುಣ್ಣಿಮೆ ನಂತರದ ಪ್ರಥಮ ಗುರುವಾರ ದೇವಾಲಯ ಗರ್ಭಗುಡಿ ಬಾಗಿಲು ತೆರೆದು ಬಲಿಪಾಡ್ಯಮಿಯ ಮರು ದಿನ ಮುಚ್ಚಿದರೆ, ಮರು ವರ್ಷದವರೆಗೂ ತೆರೆಯುವಂತಿಲ್ಲ.ಆದರೆ, ದೇವಾಲಯದ ಆರ್ಚಕ ನಾಗರಾಜ್ ಭಟ್ ಅವರು ಭಾನುವಾರ ಗರ್ಭಗುಡಿ ಹೊರ ಭಾಗದಲ್ಲಿ ದೇವಿಯ ಪ್ರತಿರೂಪ ಇರಿಸಿ ಪೂಜೆ ಆರಂಭಿಸಿ, ಕಾಣಿಕೆ ಹುಂಡಿಯನ್ನೂ ತಂದಿರಿಸಿಕೊಂಡಿದ್ದರು. ಅದನ್ನು ದೇವಾಲಯದ ಇತರೆ ಆರ್ಚಕರು ವಿರೋಧಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.