ADVERTISEMENT

ಯಗಚಿ ಜಲಾಶಯಕ್ಕೆ ಬೇಕಿದೆ ಕಾಯಕಲ್ಪ

ಇಳಿಜಾರಿನಲ್ಲಿ ನಡೆಯುವುದೇ ದುಸ್ತರ: ಸೌಲಭ್ಯಗಳ ನಿರೀಕ್ಷೆಯಲ್ಲಿ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 16:33 IST
Last Updated 23 ಜುಲೈ 2022, 16:33 IST
ಬೇಲೂರಿನ ಯಗಚಿ ಜಲಾಶಯದಿಂದ 5 ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗಿದೆ.
ಬೇಲೂರಿನ ಯಗಚಿ ಜಲಾಶಯದಿಂದ 5 ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗಿದೆ.   

ಬೇಲೂರು: ಚಿಕ್ಕಮಗಳೂರು ರಸ್ತೆಯಲ್ಲಿ ಪಟ್ಟಣಕ್ಕೆ ಕೇವಲ 2 ಕಿ.ಮೀ ದೂರದಲ್ಲಿ ಚಿಕ್ಕಬ್ಯಾಡಿಗೆರೆ ಗ್ರಾಮದ ಬಳಿ ಇರುವ ಯಗಚಿ ಜಲಾಶಯ ಈ ವರ್ಷ ನಾಲ್ಕನೇ ಬಾರಿಗೆ ಭರ್ತಿಯಾಗಿದೆ. ಆದರೆ, ಯಗಚಿ ಜಲಾಶಯ ವೀಕ್ಷಣೆಗೆ ಬರುವ ಪ್ರವಾಸಿಗರು ಮೂಲಸೌಕರ್ಯಗಳ ಕೊರತೆಯಿಂದ ಬೇಸರ ವ್ಯಕ್ತಪಡಿಸುವಂತಾಗಿದೆ.

ಯಗಚಿ ಜಲಾನಯನ ಪ್ರದೇಶಗಳಲ್ಲಿ 20 ದಿನದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, 5 ಕ್ರೆಸ್ಟ್ ಗೇಟ್ ಮೂಲಕ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದಿಂದ ಭೋರ್ಗರೆಯುತ್ತ ಹರಿಯುವ ನೀರಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮಳೆಯ ನಡುವೆಯೂ ಜನ ತೆರಳುತ್ತಿದ್ದಾರೆ. ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಶಯದ ಮೇಲಿನಿಂದ ನದಿಯಲ್ಲಿ ಮೈದುಂಬಿ ಹರಿಯುವ ನೀರಿನ ನೋಟವೂ ರುದ್ರರಮಣೀಯವಾಗಿದೆ.

ತಾಲ್ಲೂಕಿನ ಗಡಿ ಗ್ರಾಮ ವಾಟೆಹೊಳೆ ಸಮೀಪ ಇರುವ ವಾಟೆಹೊಳೆ ಜಲಾಶಯವೂ ಭರ್ತಿಯಾಗಿದ್ದು, 3 ಕ್ರಸ್ಟ್‌ಗೇಟ್ ಮೂಲಕ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅಲ್ಲಿಗೆ ಹೆಚ್ಚಿನ ಪ್ರವಾಸಿಗರು ಹೋಗಲು ಸಾಧ್ಯವಿಲ್ಲದ್ದರಿಂದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಯಗಚಿ ಜಲಾಶಯ ವೀಕ್ಷಣೆಗೆ ಬರುತ್ತಿದ್ದಾರೆ.

ADVERTISEMENT

ಚನ್ನಕೇಶವಸ್ವಾಮಿ ದೇವಾಲಯಕ್ಕೆ ಬರುವ ಪ್ರವಾಸಿಗರು ಮತ್ತು ಚಿಕ್ಕಮಗಳೂರಿಗೆ ತೆರಳುವ ಪ್ರಯಾಣಿಕರು ಹಾಗೂ ಸ್ಥಳೀಯ ಸುತ್ತಲಿನ ಗ್ರಾಮಸ್ಥರು, ಹೆಚ್ಚು ಉತ್ಸುಕತೆಯಿಂದ ಯಗಚಿ ಜಲಾಶಯ ವೀಕ್ಷಿಸುತ್ತಿದ್ದಾರೆ.

ಜಲಾಶಯದ ದ್ವಾರದಿಂದ ನೀರು ಹರಿಯುವ ಮನಮೋಹಕ ದೃಶ್ಯ ಆಸ್ವಾದಿಸಲು ತೆರಳುವಾಗ ಇಳಿಜಾರಿನಂತಿರುವ ಕೆಸರಿನ ಕಿರಿದಾದ ರಸ್ತೆ ಜಾರುತ್ತದೆ. ಕೆಲವರು ಜಾರಿ ಬಿದ್ದಿರುವುದೂ ಇದೆ. ನೀರು ಹರಿಯುವ ಎರಡೂ ಬದಿಯಲ್ಲಿ ಕಂಬಿಗಳನ್ನು ಅಳವಡಿಸಿದ್ದರೂ, ಕೆಸರು ಮತ್ತು ಇಳಿಜಾರು ರಸ್ತೆ ಅಪಾಯಕ್ಕೆ ಅವಕಾಶ ನೀಡುತ್ತಿದೆ.

ಇದು ಒಂದು ಸಮಸ್ಯೆಯಾದರೆ, ಜಲಾಶಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ, ಜಲಾಶಯದ ಬಳಿ ಕಾಯಂ ಉಪಾಹಾರ ಮಂದಿರವಾಗಲಿ, ತಂಗುದಾಣವಾಗಲಿ ಇಲ್ಲ. ಕೆಲವೊಂದು ಮೂಲಸೌಲಭ್ಯಗಳ ಕಲ್ಪಿಸುವಲ್ಲಿ ಯಗಚಿ ಯೋಜನಾ ಅಧಿಕಾರಿಗಳ ನಿರಾಸಕ್ತಿ ಕಂಡುಬರುತ್ತಿದೆ ಎಂದು ಜನರು ದೂರುತ್ತಿದ್ದಾರೆ.

‘‌ಸೌಕರ್ಯ ಕಲ್ಪಿಸಿ’

‘ನೀರು ಹೊರ ಹೋಗುವ ದೃಶ್ಯ ನೋಡುವ ಸ್ಥಳದಲ್ಲಿ, ಕಬ್ಬಿಣದ ಕಂಬಿಗಳನ್ನು ಅಳವಡಿಸಿರುವ ಸ್ಥಳದ ಪಕ್ಕದಲ್ಲಿ ಸುಮಾರು ಹತ್ತು ಅಡಿ ಅಗಲ ಇಂಟರ್‌ಲಾಕ್ ಅಳವಡಿಸಬೇಕು. ಇಳಿಜಾರು ಇರುವ ಸ್ಥಳದಲ್ಲಿ ಕಾಂಕ್ರೀಟ್ ಮೆಟ್ಟಿಲುಗಳನ್ನು ನಿರ್ಮಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.