ಬೇಲೂರು: ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಗಚಿ ಜಲಾಶಯದ ಒಳ ಹರಿವು ಹೆಚ್ಚಾಗುತ್ತಿದ್ದು, ಅಣೆಕಟ್ಟು ಭರ್ತಿಯಾಗಲು 3 ಅಡಿ ಮಾತ್ರ ಬಾಕಿ ಇದೆ.
3.603 ಟಿಎಂಸಿ ನೀರು ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 3.103 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು 170 ಕ್ಯುಸೆಕ್ ಇದೆ. ಆಲ್ದೂರು, ಮಾಕೋನಹಳ್ಳಿ, ಸಿಂಗಾಪುರದ ಭಾಗದಲ್ಲಿ ಜೋರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಒಳ ಹರಿವು ಹೆಚ್ಚಾಗಿದೆ. ಕಳೆದ ವರ್ಷ ಆಗಸ್ಟ್ ವೇಳೆಗೆ ಜಲಾಶಯ ಭರ್ತಿಯಾಗಿ 5 ಕ್ರಸ್ಟ್ ಗೇಟ್ ಮೂಲಕ ನೀರನ್ನು ಹೊರಬಿಡಲಾಗಿತ್ತು. ಆದರೆ, ಈ ಬಾರಿ ಜುಲೈನಲ್ಲೇ ಭರ್ತಿಯಾಗುವ ನಿರೀಕ್ಷೆ ಇದೆ.
ತಾಲ್ಲೂಕಿನ ಮಲೆನಾಡು ಪ್ರದೇಶಗಳಾದ ಅರೇಹಳ್ಳಿ, ಬಿಕ್ಕೋಡು, ಗೆಂಡೇಹಳ್ಳಿ, ಬೇಲೂರು ಪಟ್ಟಣ, ಹಳೇಬೀಡು, ಮಾದಿಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಜಲಾಶಯದಿಂದ ಪಟ್ಟಣ, ಚಿಕ್ಕಮಗಳೂರು ನಗರ, ಅರಸೀಕೆರೆಯ 51 ಗ್ರಾಮ ಮತ್ತು ತಾಲೂಕಿನ 12 ಗ್ರಾಮಗಳಿಗೆ
ಕುಡಿಯುವ ನೀರು ಪೂರೈಸಲಾಗುತ್ತದೆ. ಚಿಕ್ಕಮಗಳೂರು ಮತ್ತು ಬೇಲೂರು ಪಟ್ಟಣಕ್ಕೆ ದಿನಕ್ಕೆ 1.85 ಮತ್ತು 0.058
ಕ್ಯುಸೆಕ್ ನೀರನ್ನು ಬಳಕೆ ಮಾಡಲಾಗುತ್ತಿದೆ.
ಅಲ್ಲದೇ ಹಾಸನ ತಾಲ್ಲೂಕು ಕಟ್ಟಾಯ ಭಾಗದ 37 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ, ಹಳೆಬೀಡು, ಮಾದೀಹಳ್ಳಿ ಹೋಬಳಿಗೆ ಏತ ನೀರಾವರಿ ಮೂಲಕ ನೀರು ಹರಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.