ಸಕಲೇಶಪುರ: ಎತ್ತಿನಹೊಳೆ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ತಾಲ್ಲೂಕಿನ ದೊಡ್ಡನಾಗರ ಗ್ರಾಮದಲ್ಲಿ ಭೂಕುಸಿತ ಹಾಗೂ ರಸ್ತೆಯೊಂದು ನಾಶವಾಗಿ ಸುಮಾರು 50 ಎಕರೆ ಪ್ರದೇಶದ ಜಮೀನಿಗೆ ಹೋಗಲು ಸಂಪರ್ಕವೇ ಕಡಿತ ಆಗಿ, ಬೆಳೆಗಾರರು, ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.
ತುಮಕೂರು, ಕೋಲಾರ, ಚಿಕ್ಯಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಅರಸೀಕೆರೆ ಭಾಗಕ್ಕೆ ನೀರು ಹರಿಸಲು ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಹಳೇಬೀಡು ಬಳಿ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹೀಗಾಗಿ ದೊಡ್ಡನಾಗರದ ಡಂಪಿಂಗ್ ಹಾಗೂ ಪಂಪಿಂಗ್ ಕೇಂದ್ರದಿಂದ ಪ್ರಾಯೋಗಿಕವಾಗಿ ಜು.26ರಿಂದ 110 ಕ್ಯುಸೆಕ್ ನೀರನ್ನು ಹೇಮಾವತಿ ನದಿಗೆ ಹರಿಸಲಾಗುತ್ತಿದೆ.
ರಭಸವಾಗಿ ನೀರು ಹರಿಯುತ್ತಿರುವುದರಿಂದ ನದಿ ಪಾತ್ರದ ಸುಮಾರು ಅರ್ಧ ಎಕರೆಯಷ್ಟು ಪ್ರದೇಶ ಹಾಗೂ ದೊಡ್ಡನಾಗರ ಗ್ರಾಮದ ಎಸ್.ವಿ. ಕೃಷ್ಣ, ಎಸ್.ವಿ. ಸುರೇಶ್ ಹಾಗೂ ಇತರ ಬೆಳೆಗಾರರ ಕಾಫಿ ತೋಟ, ಭತ್ತದ ಗದ್ದೆಗೆ ಹೋಗುವುದಕ್ಕೆ ಇದ್ದ ಏಕೈಕ ರಸ್ತೆಯೂ ಕೊಚ್ಚಿಹೋಗಿದೆ.
ಎತ್ತಿನಹೊಳೆ, ಕಾಡುಮನೆ ಹಳ್ಳ, ಕೇರಿಹಳ್ಳ, ಹೊಂಗಡಹಳ್ಳ ಸೇರಿದಂತೆ ಒಟ್ಟು 8 ಕಿರು ಅಣೆಕಟ್ಟೆಗಳಿಂದ ಪೈಪ್ಗಳ ಮೂಲಕ ದೊಡ್ಡನಾಗರ ಪಂಪ್ ಹೌಸ್ಗೆ ನೀರು ಹರಿಸಲಾಗುತ್ತದೆ. ಅಲ್ಲಿಂದ ಹೆಬ್ಬನಹಳ್ಳಿಯಲ್ಲಿ ನಿರ್ಮಾಣ ಮಾಡಿರುವ ಗುರುತ್ವ ಕಾಲುವೆವರೆಗೆ ಪಂಪ್ಗಳಿಂದ ನೀರು ಹರಿಸಲಾಗುತ್ತದೆ. ಮುಂದೆ ಬಯಲು ಸೀಮೆ ಕಡೆಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ.
ಗುರುತ್ವ ಕಾಲುವೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಬ್ಯಾರೇಜ್ಗಳಲ್ಲಿ ಸಂಗ್ರಹವಾಗುವ ನೀರನ್ನು ದೊಡ್ಡನಾಗರ ಪಂಪ್ ಹೌಸ್ವರೆಗೂ ಹರಿಸಲಾಗುತ್ತಿದೆ. ಅಲ್ಲಿಂದ ಆ ನೀರನ್ನು ನೇರವಾಗಿ ಹೇಮಾವತಿ ನದಿಗೆ ಬಿಡಲಾಗುತ್ತಿದೆ.
ಅವೈಜ್ಞಾನಿಕವಾಗಿ ಮಾಡಿರುವ ಕಾಮಗಾರಿಯಿಂದಾಗಿ ಮರು ನಿರ್ಮಾಣ ಮಾಡುವುದಕ್ಕೂ ಸಾಧ್ಯವಿಲ್ಲದಷ್ಟು ಆಳ ಹಾಗೂ ಅಗಲದ ಭೂಮಿಯಲ್ಲಿ ಹೊಂಡ ಬಿದ್ದು ಹೋಗಿದೆ. ಅಕ್ಕಪಕ್ಕದಲ್ಲಿ ನಿಂತುಕೊಳ್ಳುವುದಕ್ಕೆ ಭಯ ಆಗುವ ರೀತಿಯಲ್ಲಿ ಭೂಮಿಯೇ ನಡುಗುವಷ್ಟು ವೇಗದಲ್ಲಿ ನೀರು ಹರಿಯುತ್ತಿದೆ.
ಇದ್ದ ಏಕೈಕ ರಸ್ತೆ ನಾಶವಾಗಿದ್ದು, ಈ ಜಮೀನುಗಳಿಗೆ ಹೋಗುವುದಕ್ಕೆ ಬದಲಿ ರಸ್ತೆ ನಿರ್ಮಾಣ ಮಾಡಲು ಸರ್ಕಾರಿ ಜಾಗವಿಲ್ಲ. ಕುಸಿದು ಹೋಗಿರುವ ಸ್ಥಳದಲ್ಲಿ ಹೊಸ ರಸ್ತೆ ಮಾಡುವುದಕ್ಕೆ ಜಾಗವೂ ಇಲ್ಲದಷ್ಟು ಭೂಮಿ ಕುಸಿದಿದೆ. ಇನ್ನು ಕೊಚ್ಚಿ ಹೋದ ರಸ್ತೆಯ ಪಕ್ಕದಲ್ಲಿದ್ದ ಸುಮಾರು ಒಂದು ಎಕರೆ ಜಾಗದಲ್ಲಿ, ಎತ್ತಿನಹೊಳೆ ಯೋಜನೆಯ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣದ ಸಾವಿರಾರು ಲಾರಿ ಮಣ್ಣು ಕಲ್ಲು ಸುರಿದು ಸುಮಾರು 50 ಅಡಿ ಎತ್ತದ ಕೃತಕ ಬೆಟ್ಟವನ್ನು ಸೃಷ್ಟಿ ಮಾಡಿದ್ದಾರೆ. ಹಾಗಾಗಿ ಅಲ್ಲಿಯೂ ಬದಲಿ ರಸ್ತೆ ಮಾಡುವುದಕ್ಕೆ ಸಾಧ್ಯವಿಲ್ಲದಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ನಮ್ಮ ಜಮೀನುಗಳಿಗೆ ಹೋಗಲು ಇದ್ದ ಒಂದೇ ಒಂದು ರಸ್ತೆಯನ್ನೂ ನಾಶ ಮಾಡಿದ್ದಾರೆ. 35 ಎಕರೆ ತೋಟದ ಶೇ 80 ಭಾಗ ಹೇಮಾವತಿ ನದಿ ಸುತ್ತುವರಿದಿದೆ. ತೋಟಗಳಿಗೆ ಹೋಗಲು ಬದಲಿ ರಸ್ತೆ ಇಲ್ಲ.ಎಸ್.ವಿ. ಕೃಷ್ಣ ಕಾಫಿ ಬೆಳೆಗಾರ
ಎತ್ತಿನಹೊಳೆ ಯೋಜನೆ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವ ಪರಿಣಾಮ ಇಂತಹ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ದೊಡ್ಡನಾಗರ ಗ್ರಾಮದಲ್ಲಿ ತೋಟ ಗದ್ದೆಗಳಿಗೆ ಹೋಗುವ ರಸ್ತೆಯೇ ನಾಶವಾಗಿದೆ. ಬದಲಿ ರಸ್ತೆ ವ್ಯವಸ್ಥೆ ಮಾಡುವಂತೆ ವಿಶ್ವೇಶ್ವರ ಜಲ ನಿಗಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.