ADVERTISEMENT

ಅಕ್ಕಿಆಲೂರಲ್ಲಿ ಕೃಷಿ ಡಿಪ್ಲೊಮಾ ಕಾಲೇಜು ಆರಂಭ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 10:45 IST
Last Updated 19 ಅಕ್ಟೋಬರ್ 2011, 10:45 IST

ಅಕ್ಕಿಆಲೂರ: ಹಾವೇರಿ ಜಿಲ್ಲೆಯ ಮೊದಲ ಕೃಷಿ ಡಿಪ್ಲೊಮಾ ಕಾಲೇಜು ಸೋಮವಾರ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಕಟ್ಟಡದಲ್ಲಿ ತನ್ನ ಶೈಕ್ಷಣಿಕ ಚಟುವಟಿಕೆ ಗಳನ್ನು ಆರಂಭಿಸುವ ಮೂಲಕ ಅಧೀಕೃತವಾಗಿ ಉದ್ಘಾಟನೆಗೊಂಡಿತು.

ಗ್ರಾಮೀಣ ಭಾಗದಲ್ಲಿ ಕೃಷಿ ತರಬೇತಿ ನೀಡುವ ಜೊತೆಗೆ ಕೃಷಿಯಲ್ಲಿ ಆರ್ಥಿಕ ಸಬಲತೆ ಕಂಡುಕೊಳ್ಳುವ ಉದ್ದೇಶದಿಂದ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 6 ಕೃಷಿ ಡಿಪ್ಲೊಮಾ ಕಾಲೇಜುಗಳನ್ನು ಆರಂಭಿಸಲಾಗುತ್ತಿದ್ದು ಇದರಲ್ಲಿ ಅಕ್ಕಿಆಲೂರ ಸಹ ಸೇರಿದೆ. ಸೋಮವಾರ ಮುಂಜಾನೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ನಾಗರಿಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಾಂಕೇತಿಕ ಪೂಜೆ ಸಲ್ಲಿಸುವ ಮೂಲಕ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.

ಪ್ರಾಸ್ತವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಸಿ.ಆರ್. ಮಲ್ಲಾಪೂರ ಹಾವೇರಿ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ಡಿಪ್ಲೊಮಾ ಕಾಲೇಜು ಆರಂಭಿಸಲಾಗುತ್ತಿದೆ. ಈ ವರ್ಷ ಕ.ವಿ.ವಿ. ವ್ಯಾಪ್ತಿಯ ಧಾರವಾಡ, ಶಿರಶಿ,  ವಿಜಾಪುರ, ಜಮಖಂಡಿ, ಹುಕ್ಕೇರಿ ಹಾಗೂ ಅಕ್ಕಿಆಲೂರಿನಲ್ಲಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ.

ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮಾತ್ರ ಕೃಷಿ ಡಿಪ್ಲೊಮಾ ಕೋರ್ಸು ಲಭ್ಯವಿತ್ತು. ನಮ್ಮ ರಾಜ್ಯದಲ್ಲಿ ಈ ಕೋರ್ಸ ಇಲ್ಲ ಎಂಬ ಕೊರಗು ಇದೀಗ ದೂರವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರ್ಬನ್ ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ ಪಾವಲಿ ಮಾತನಾಡಿ, ಕೃಷಿ ಕಾಲೇಜು ಆರಂಭಗೊಂಡಿರುವುದು ರೈತನ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರಗತಿಪರ ಕೃಷಿಕ ಅಶೋಕ ಸಣ್ಣವೀರಪ್ಪನವರ ಮಾತನಾಡಿದರು. ಜಿ.ಪಂ. ಸದಸ್ಯೆ ಗೀತಾ ಅಂಕಸಖಾನಿ ಜ್ಯೋತಿ ಬೆಳಗಿಸುವ ಮೂಲಕ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ತಾ.ಪಂ. ಮಾಜಿ ಅಧ್ಯಕ್ಷ ಎಲ್.ಕೆ. ಶೇಷಗಿರಿ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಗ್ರಾ.ಪಂ. ಉಪಾಧ್ಯಕ್ಷೆ ರತ್ನವ್ವ ಸವಣೂರ, ಚೆನ್ನವೀರೇಶ್ವರ ಪ್ರಸಾದ ನಿಲಯ ಪಬ್ಲಿಕ್ ಟ್ರಸ್ಟ್ ಅಧ್ಯಕ್ಷ ಎನ್.ಸಿ. ಪಾವಲಿ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಎಸ್.ಎಂ. ಸಿಂಧೂರ, ತಾ.ಪಂ. ಮಾಜಿ ಸದಸ್ಯ ಎಂ.ಎಚ್. ಬ್ಯಾಡಗಿ, ಗಣ್ಯರಾದ ಉದಯಕುಮಾರ ವಿರುಪಣ್ಣನವರ, ರಾಜಣ್ಣ ಅಂಕಸಖಾನಿ, ರವಿ ಬೆಲ್ಲದ, ವೀರಣ್ಣ ಕೋರಿಶೆಟ್ಟರ, ಬಿ.ವೈ. ಸೂರಕೊಂಡರ, ಎಸ್.ಎಸ್. ಮುಷ್ಠಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಜಿ. ಧಾರವಾಡ, ಎ.ಎ. ಅರಳೇಶ್ವರ, ಹರೀಶ ಸುಲಾಖೆ, ಫಕ್ಕೀರಗೌಡ ಪಾಟೀಲ, ಬಸೀರಖಾನ ಪಠಾಣ, ವಿಶ್ವನಾಥ ಭಿಕ್ಷಾವರ್ತಿಮಠ, ಎಂ.ಎಸ್. ಮುಚ್ಚಂಡಿ, ಆರ್.ಎಸ್. ಪಾಟೀಲ, ಮಹಲಿಂಗಯ್ಯ ಜವಳಿಮಠ, ಪಿ.ಕೆ. ಬಾಬಜಿ, ಶಿವಕುಮಾರ ದೇಶಮುಖ  ಪಾಲ್ಗೊಂಡಿದ್ದರು.

ಬಸವರಾಜ ಸಾಲಿಮಠ ಪ್ರಾರ್ಥನೆ ಹಾಡಿದರು. ಡಾ.ಅಷ್ಠಪುತ್ರ ಸ್ವಾಗತ ಕೋರಿದರು. ಎಸ್.ಎಸ್. ಮುಚ್ಚಂಡಿ ನಿರೂಸಿದರು. ಡಾ.ರಾಜಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.