ಹಾನಗಲ್: ರಾಮ, ಲಕ್ಷ್ಮಣ, ಹನುಮಂತನ ವೇಷಭೂಷಣಗಳ ಮೂಲಕ ಗ್ರಾಮೀಣ ಭಾಗದಲ್ಲಿ ರಂಜಿಸುತ್ತಿದ್ದ ‘ಬಹುರೂಪಿ’ ಕಲಾವಿದರು ಇದೀಗ ಕಾಣಸಿಗುವುದೇ ಅಪರೂಪ.
ಹೊಟ್ಟೆಪಾಡಿಗಾಗಿ ‘ಹಗಲು ವೇಷ’ ಧರಿಸುವ ಇವರು, ತಲೆಮಾರುಗಳಿಂದ ಬಳುವಳಿಯಾಗಿ ಬಂದ ಕಾಯಕವನ್ನು ಬಹುತೇಕರು ಈಗಾಗಲೇ ತ್ಯಜಿಸಿದ್ದಾರೆ. ಅಲ್ಲಲ್ಲಿ ಕೆಲವರು ಈಗಲೂ ಹಗಲು ವೇಷ ಧರಿಸಿ ರಂಜಿಸುವ ಕಾಯಕ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಪೌರಾಣಿಕ ಪ್ರಸಂಗಗಳನ್ನು ನೆನಪಿಸುವ ವೇಷ ತೊಟ್ಟು, ಹಾರ್ಮೋನಿಯಂ, ತಬಲಾ ಮತ್ತು ತಾಳದ ಜೊತೆಯಲ್ಲಿ ಭಕ್ತಿಗೀತೆ ಗುನುಗುತ್ತ ಮನೆ–ಮನೆಗೆ ಭೇಟಿ ನೀಡುವ ವೇಷಧಾರಿಗಳು, ಜನರು ನೀಡಿದ ಹಣ ಸ್ವೀಕರಿಸಿ ಮುಂದಡಿ ಇಡುತ್ತಾರೆ.
ಸಂಗೀತ ಆಸಕ್ತರು ಈ ವೇಷಧಾರಿಗಳನ್ನು ಮನೆಯ ಕಟ್ಟೆಯ ಮೇಲೆ ಕೂಡಿಸಿ ತಮಗಿಷ್ಟದ ಹಾಡು ಹೇಳಿಸಿಕೊಂಡು ಖುಷಿ ಪಡುತ್ತಾರೆ.
‘ನಾವು ಹಾನಗಲ್ ನಿವಾಸಿಗಳು. ಹಿಂದೆ ಗ್ರಾಮೀಣ ಭಾಗದಲ್ಲಿ ಸಂಚರಿಸಿ ರಾಮಾಯಣ, ಮಹಾಭಾರತ ಮತ್ತಿತರ ಪೌರಾಣಿಕ ಪಾತ್ರಗಳ ವೇಷ ತೊಟ್ಟು ಆದಾಯ ಕಂಡುಕೊಳ್ಳುತ್ತಿದ್ದೇವು. ಒಂದೊಂದು ಗ್ರಾಮದಲ್ಲಿ ವಾರಗಟ್ಟೆಲೇ ಇದ್ದು, ರಂಜಿಸುತ್ತಿದ್ದೆವು. ಈ ಕಾಯಕ ಈಗ ನಮ್ಮವರಿಗೇ ಬೇಡವಾಗಿದೆ’ ಎಂದು ಹಗಲು ವೇಷಧಾರಿ ಗುಂಪಿನ ಹಿರಿಯ ಕಲಾವಿದ ಹಾನಗಲ್ನ ಚಿನ್ನಸ್ವಾಮಿ ಮಹಾಂತ್ ಬೇಸರ ವ್ಯಕ್ತಪಡಿಸುತ್ತಾರೆ.
‘ಟಿ.ವಿ, ಮೊಬೈಲ್ ಹಾವಳಿಯಿಂದ ಹಗಲು ವೇಷಧಾರಿಗಳ ಪ್ರದರ್ಶನ ಆಕರ್ಷಣೆ ಕಳೆದು ಕೊಳ್ಳುತ್ತಿದೆ. ಹೀಗಾಗಿ ಹೊಟ್ಟೆಪಾಡಿಗೆ ನಮ್ಮ ಜನರು ಕಾಯಕ ಬದಲಾಯಿಸಿ ಬೇರೆ ಉದ್ಯೋಗ ಅರಿಸುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.
**
ಸ್ಥಳದಲ್ಲಿಯೇ ಪದ ಕಟ್ಟಿ ಹಾಡುವ ಹಗಲು ವೇಷಧಾರಿಗಳು ಒಂದರ್ಥದಲ್ಲಿ ವೇದಾಂತಿಗಳು. ಆದರ್ಶ ಜೀವನದ ಬೋಧನೆ ಅವರ ಕಾಯಕ
– ಪಿ.ಧರ್ಮಣ್ಣ, ಸ್ಥಳೀಯ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.