ಹಿರೇಕೆರೂರ: ತಾಲ್ಲೂಕಿನ ಯೋಗಿಕೊಪ್ಪ ಗ್ರಾಮದಲ್ಲಿ ಬಿ.ಟಿ.ಹತ್ತಿ ಬೆಳೆ ಕಳಪೆ ಬೀಜಗಳ ಪೂರೈಕೆಯಾಗಿದೆ ಎಂದು ರೈತರು ಆರೋಪಿಸಿರುವ ಬೆನ್ನಲ್ಲೆ ಧಾರವಾಡ ವಿಶ್ವ ವಿದ್ಯಾಲಯದ ತಜ್ಞರ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಿಟಿ ಹತ್ತಿ ಬೆಳೆ ಚೆನ್ನಾಗಿ ಬೆಳೆದರೂ ಕಾಯಿ ಕಟ್ಟದ ಕಾರಣ ಬಿಟಿ ಹತ್ತಿ ಬಿತ್ತಿದ ತಾಲ್ಲೂಕಿನ ಸುಮಾರು 180 ಎಕರೆ ಜಮೀನಿನ ರೈತರು ಕಂಗಾಲಾಗಿದ್ದಾರೆ.
ತಳಿ ಶಾಸ್ತ್ರಜ್ಞ ಡಾ.ಎಸ್.ಎಸ್.ಪಾಟೀಲ, ಕೀಟ ಶಾಸ್ತ್ರಜ್ಞ ಡಾ.ಬಿ.ಎಸ್.ನಂದಿಹಳ್ಳಿ, ರೋಗ ತಜ್ಞ ಡಾ.ಎಂ.ಎಸ್.ಎಲ್.ರಾವ್ ನೇತೃತ್ವದ ತಂಡ ಬೆಳೆಗಳ ಪರಿಶೀಲನೆ ನಡೆಸಿ, ರೈತರ ಅಹವಾಲು ಆಲಿಸಿದರು. ವರದಿಯನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಗ್ರಾಮದ ಬೆಳೆದು ನಿಂತಿರುವ 180 ಎಕರೆ ಬಿ.ಟಿ.ಹತ್ತಿ ಬೆಳೆ ಕಳಪೆ ಬೀಜದಿಂದ ಫಸಲು ನೀಡದಂತಾಗಿದ್ದು, ರೈತರು ಸಾವಿರಾರು ರೂಪಾಯಿ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದೇವೆ.
ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ರೈತರಾದ ಶೇಕಪ್ಪ ದೀವಿಗಿಹಳ್ಳಿ, ಸಿ.ಎನ್.ಬಣಕಾರ, ರುದ್ರಗೌಡ ಪಾಟೀಲ, ಎಂ.ಬಿ.ಪಾಟೀಲ, ಹೊಳಿಯಪ್ಪ ಹಂಸಭಾವಿ, ಆರ್.ಎಸ್.ಪಾಟೀಲ, ಸೋಮಪ್ಪ ಸುಂಕಾಪುರ ಮೊದಲಾದವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಸಹಾಯಕ ಕೃಷಿ ನಿರ್ದೇಶಕ ಪಿ.ಸೇವಾನಾಯ್ಕ, ಅನ್ನಪೂರ್ಣ ಪಾಟೀಲ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.