ADVERTISEMENT

ಕಳ್ಳತನ ಪ್ರಕರಣ: ನಿಯಂತ್ರಣಕ್ಕೆ ಅಗತ್ಯ ಕ್ರಮ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 6:40 IST
Last Updated 21 ಫೆಬ್ರುವರಿ 2012, 6:40 IST

ಹಾವೇರಿ: `ಹಗಲು ಹೊತ್ತಿನಲ್ಲಿಯೇ ಸರಗಳ್ಳತನ, ಬೆಳ್ಳಿ ಬಂಗಾರದ ವಸ್ತುಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಅವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದೆ~ ಎಂದು ಡಿವೈಎಸ್ಪಿ ಎಸ್. ಎಲ್. ಸಿಂಗದ ಹೇಳಿದರು.

ನಗರದ ಸುರ್ವರ್ಣ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ ಇತ್ತೀಚೆಗೆ ಕರೆಯಲಾದ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಂಗಾರ ಖರೀದಿ ಮಾಡುವ ನೆಪದಲ್ಲಿ ಕಳ್ಳರು ಬಂದು ಅಂಗಡಿಯಲ್ಲಿದ್ದ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಕಳ್ಳತನ ಮಾಡುವ ಸಾಧ್ಯತೆ ಇರುತ್ತದೆ. ಗಮನ ಬೇರೆ ಕಡೆಗೆ ಸೆಳೆದು ಅಂಗಡಿಯಲ್ಲಿಟ್ಟ ಬೆಳ್ಳಿ ಮತ್ತು ಬಂಗಾರದ ವಸ್ತುಗಳನ್ನು ಕಳ್ಳತನ ಮಾಡುವ ಸಾಧ್ಯತೆಯೂ ಹೆಚ್ಚಿದೆ ಎಂದರು.

ಅದೇ ರೀತಿ ಬಂಗಾರ ತೊಳೆದುಕೊಡುವ ನೆಪದಲ್ಲಿ ಇಲ್ಲವೇ ಮಹಿಳೆಯರು ಒಬ್ಬಂಟಿಗರಾಗಿ ಹೋಗುವ ಸಂದರ್ಭದಲ್ಲಿ ಸರಗಳ್ಳತನ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಚಿನ್ನಾಭರಣ ಅಂಗಡಿ ಮಾಲೀಕರು, ಮಹಿಳೆಯರು, ಸಾರ್ವಜನರಿಕರು ಸಹ ಸೂಕ್ತ ಎಚ್ಚರಿಕೆ ವಹಿಸಬೇಕೆಂದು ಸಲಹೆ ಮಾಡಿದರು.

ಅಂಗಡಿ ಮಾಲೀಕರು ತಮ್ಮ ಅಂಗಡಿಗೆ ಸಿಸಿ ಟಿವಿ ಕ್ಯಾಮರಾ, ಬರಗಲ್ ಅಲಾರಾಮ್ (ಸೈರಾನ್) ಅನ್ನು ಕೂಡ ಅಳವಡಿಸಿಕೊಳ್ಳಬೇಕು. ಅಂಗಡಿಗೆ ಬೀಗ ಹಾಕುವಾಗ ಬೀಗದ ಕೊಂಡಿ ಕಿರಿದಾಗಿ ಇರಬೇಕು. ಕೀಲಿಯ ಕೊಂಡಿಯಲ್ಲಿ ಕಬ್ಬಿಣದ ರಾಡು, ಸ್ಕ್ರೂ ಡ್ರೈವರ್ ಹಾಕಿ ಮೀಟಿ ತೆಗೆಯುವ ಹಾಗೆ ಕೊಂಡಿ ಇರದೇ ಅತಿ ಸಣ್ಣಕೊಂಡಿಯ ಬೀಗ ಅವಳಡಿಸಿಕೊಳ್ಳಬೇಕು. ಅಂಗಡಿಗಳಿಗೆ ಸೆಕ್ಯೂರಿಟಿ ಗಾರ್ಡ್ ನೇಮಿಸಿಕೊಂಡರೇ ಹೆಚ್ಚು ಸೂಕ್ತ ಎಂದು ಹೇಳಿದರು.

ಶಹರ ಠಾಣೆಯ ಸಿಪಿಐ ಪಂಪಾಪತಿ ಮಾತನಾಡಿ, ಬೆಳ್ಳಿ ಬಂಗಾರದ ಆಭರಣಗಳನ್ನು ಹೊರಗಡೆ ಖರೀದಿ ಮತ್ತು ಮಾರಾಟ ಮಾಡಿಕೊಂಡು ಬರುವ ಸಮಯದಲ್ಲಿ ಅತಿ ಹೆಚ್ಚಿನ ಕಾಳಜಿ ವಹಿಸಬೇಕು. ಬ್ಯಾಗು ಬಿಟ್ಟು ವಾಹನದಿಂದ ಇಳಿದು ಅಪರಿಚಿತರಿಗೆ ಅಥವಾ ಬೇರೆಯವರಿಗೆ ನೀಡುವುದರಿಂದ ಮೋಸ ಹೋಗುವ ಸಾಧ್ಯತೆ ಇದೆ ಎಂದು ಹೇಳಿದರು.

ಕಳ್ಳತನದಿಂದ ತಂದ ಬೆಳ್ಳಿ ಬಂಗಾರದ ವಸ್ತುಗಳನ್ನು ಯಾವ ಅಂಗಡಿಕಾರರೂ ಖರೀದಿಸಬಾರದು. ಈ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಮ್‌ಗೆ ತಕ್ಷಣ ಮಾಹಿತಿ ತಿಳಿಸಬೇಕು ಎಂದು ಚಿನ್ನದ ಅಂಗಡಿ ಮಾಲೀಕರಿಗೆ ಸೂಚಿಸಿದರು.

ಸರಾಫ್ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಜಿ. ವಿಠ್ಠಲಕರ, ಉಪಾಧ್ಯಕ್ಷ ಎಸ್‌ಎಂ. ಪೋತದಾರ, ಪಿಎಸ್‌ಐ ಕೆ.ಆರ್. ಗೋವಿಂದಪ್ಪ, ಮಂಜುನಾಥ ಪುತಳೇಕರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.