ADVERTISEMENT

ಖಾಸಗಿ ಸಾರಿಗೆ ವಾಹನಗಳ ಪ್ರವೇಶ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:06 IST
Last Updated 25 ಏಪ್ರಿಲ್ 2017, 6:06 IST

ಹಾನಗಲ್:  ‘ಪಟ್ಟಣದ ಮುಖ್ಯ ಬಸ್‌ ನಿಲ್ದಾಣದ ಸಮೀಪ ಖಾಸಗಿ ಸಾರಿಗೆ ವಾಹನಗಳ ಪ್ರವೇಶವನ್ನು ನಿಷೇಧಿಸಬೇಕು’ ಎಂದು  ಒತ್ತಾಯಿಸಿ ಇಲ್ಲಿನ ಸಾರಿಗೆ ಘಟಕದ ವ್ಯವಸ್ಥಾಪಕ ಆರ್‌.ಸರ್ವೇಶ ಅವರ ನೇತೃತ್ವದಲ್ಲಿ ಘಟಕದ ಚಾಲಕ ಮತ್ತು ನಿರ್ವಾಹಕರು ತಹಶೀಲ್ದಾರ್‌ ಶಕುಂತಲಾ ಚೌಗಲಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಬಸ್‌ ನಿಲ್ದಾಣದ ಸುತ್ತ ಖಾಸಗಿ ವಾಹನ ಭರಾಟೆ ಹೆಚ್ಚಿದೆ. ನಿಲ್ದಾಣದಿಂದ 500 ಮೀಟರ್‌ ಅಂತರದಲ್ಲಿ ಖಾಸಗಿ ವಾಹನಗಳು ನಿಲ್ಲಬೇಕು ಎಂಬ ಜಿಲ್ಲಾಧಿಕಾರಿಗಳ ಆದೇಶವು ಇಲ್ಲಿ ನಿತ್ಯ ಉಲ್ಲಂಘನೆಯಾಗುತ್ತಿದೆ. ಖಾಸಗಿ ವಾಹನಗಳ ಏಜಂಟರು, ಚಾಲಕರು, ನಿರ್ಹಾಹಕರು ದಬ್ಬಾಳಿಕೆ ಮಾಡುತ್ತಾರೆ. ಇದರಿಂದ ಸಾರಿಗೆ ಇಲಾಖೆಗೆ ನಷ್ಟ ಆಗುತ್ತಿದೆ’ ಎಂದು ಮನವಿ ಪತ್ರದಲ್ಲಿ ದೂರಲಾಗಿದೆ.

‘ಈ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಈತನಕ ಯಾವುದೇ ಕ್ರಮ ಜರುಗಿಸಿಲ್ಲ. ಒಂದು ವಾರದ ಒಳಗಾಗಿ ಈ ಸಮಸ್ಯೆ ಪರಿಹಾರ ಆಗದಿದ್ದರೇ, ಬಸ್‌ ನಿಲ್ದಾಣ ಎದುರು ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಲಾಗಿದೆ.

ADVERTISEMENT

ಮನವಿಪತ್ರಕ್ಕೆ ಸ್ಪಂದಿಸಿದ ತಹಶೀಲ್ದಾರ್‌ ಶಕುಂತಲಾ ಚೌಗಲಾ, ‘ಪೊಲೀಸ್‌ ಇಲಾಖೆಯೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಇತ್ಯರ್ಥ  ಪಡಿಸಲಾಗುವುದು’ ಎಂದು ಭರವಸೆ ನೀಡಿದರು.ಸಾರಿಗೆ ಸಿಬ್ಬಂದಿ ಎಸ್‌.ಎಂ.ದೇವಣ್ಣನವರ, ಸಿ.ಜಿ.ಹಿರೇಮಠ, ಐ.ಎಂ.ಬಡಿಗೇರ, ಕೆ.ಎಫ್‌.ಬಾರ್ಕಿ, ಡಿ.ಬಿ.ಶೇಷಗಿರಿ, ಯು.ಎಸ್‌.ರಾಯ್ಕರ, ಸಿ.ಟಿ.ಹರಿಜನ, ಎಸ್‌.ಬಿ.ಹೆಬ್ಬಳ್ಳಿ, ಎಂ.ಎಂ.ಗುಲಾಮಲಿಶಾ, ವೈ.ಎಚ್‌.ಭಜಂತ್ರಿ ಈ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.