ADVERTISEMENT

ಗುತ್ತಲ ಗ್ರಾಮ ಸಭೆ: ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜೂನ್ 2011, 6:25 IST
Last Updated 29 ಜೂನ್ 2011, 6:25 IST
ಗುತ್ತಲ ಗ್ರಾಮ ಸಭೆ: ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹ
ಗುತ್ತಲ ಗ್ರಾಮ ಸಭೆ: ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹ   

ಗುತ್ತಲ: ವಿದ್ಯುತ್ ಪೂರೈಕೆ, ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ, ಮೀನು ಮಾರುಕಟ್ಟೆಯ ಸ್ಥಳಾಂತರ ಕುರಿತಂತೆ ಇಲ್ಲಿನ ಗ್ರಾಪಂ.ನಲ್ಲಿ ಇತ್ತೀಚೆಗೆ  ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಮಧ್ಯೆ ಜಟಾಪಟಿ ನಡೆಯಿತು.

ಗ್ರಾಮದ ಪ್ರಮುಖ ಬೀದಿಯಲ್ಲಿ ರುವ ಮೀನು ಮಾರುಕಟ್ಟೆಯ ಸ್ಥಳಾಂತರಕ್ಕೆ  ಗ್ರಾಪಂ ಮಾಜಿ ಸದಸ್ಯ ಪರಶುರಾಮ ಯಲಗಚ್ಚ ಪಟ್ಟು ಹಿಡಿದರು. ಇನ್ನೆರಡು ದಿನಗಳಲ್ಲಿ ಮಾರುಕಟ್ಟೆಯನ್ನು ಸ್ಥಳಾಂತರಿಸದಿದ್ದರೆ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿ ಭಟಿಸುವುದಾಗಿ ಎಚ್ಚರಿಕೆ ನೀಡಿದರು. ಮಧ್ಯೆ ಪ್ರವೇಶಿಸಿದ ಗ್ರಾಪಂ ಅಧ್ಯಕ್ಷ ಬಸೀರ ಅಹ್ಮದ್ ಬಲೇಬಾಯಿ, ಮಾರುಕಟ್ಟೆ ಸ್ಥಳಾಂತರಕ್ಕೆ 8ಗುಂಟೆ ಜಾಗದ ಅಗತ್ಯವಿದೆ. ಈ ಕುರಿತು ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಕಳಿಸಲಾಗಿದ್ದು, ಶೀಘ್ರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇರುವುದಿಲ್ಲ ಎಂದ ಗ್ರಾಮಸ್ಥರು ಇಚ್ಚಂಗಿ ರೋಗಿಗಳಿಗೆ ಔಷಧಿಯನ್ನು ವಿತರಿಸದೇ ಹೊರಗಡೆ ಯಿಂದ ಕೊಂಡುಕೊಳ್ಳುವಂತೆ ಸೂಚಿಸುತ್ತಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಮೀನಮೇಷ ಎಣಿಸುತ್ತಿ ರುವ ಸ್ಥಳೀಯ ವಿದ್ಯುತ್ ವಿತರಣಾ ಘಟಕದ ಅಧಿಕಾರಿ ಎಂ.ಎಸ್.ಕುಮ್ಮೂರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮ ಸ್ಥರು ಪ್ರತಿ ದಿನ 5 ರಿಂದ 6 ಬಾರಿ ವಿದ್ಯುತ್ ಸ್ಥಗಿತಗೊಳಿಸುತ್ತಾರೆ ಎಂದು ದೂರಿದರು. ಅಲ್ಲದೆ ಭಾಗ್ಯ ಜ್ಯೋತಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಕ್ರಮವನ್ನು ಗ್ರಾಮಸ್ಥರು ಖಂಡಿಸಿದರು. ಈ ಕುರಿತು ಸ್ಪಷ್ಟನೆ ನೀಡಿದ ಕುಮ್ಮೂರ, ಇಲಾಖೆಯ ಆದೇಶದಂತೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಭಾಗ್ಯ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮೂರು ಕಂತುಗಳಲ್ಲಿ ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸಲು ತಿಳಿಸಲಾಗಿದೆ ಎಂದು ಹೇಳಿದರು.

ಗ್ರಾಪಂನ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಸಿಗುತ್ತಿಲ್ಲ. ಗ್ರಾಮದ ಎಲ್ಲ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿವೆ. ರಸ್ತೆ ಅಭಿವೃದ್ಧಿಗೆ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಡಳಿತ ಮಂಡಳಿಯನ್ನು ಒತ್ತಾಯಿಸಿ ದರು. ವಿವಿಧ ಯೋಜನೆಗಳಲ್ಲಿ ಮಂಜೂ ರಾದ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಉಪ ತಹಸೀಲ್ದಾರ ಎಂ.ಎಚ್. ಕುಶ ನೂರ, ಪಶು ವೈದ್ಯಾಧಿಕಾರಿ ಅಕ್ಷತಾ, ಕೃಷಿ ಅಧಿಕಾರಿ ಬಿ.ಕೆ. ಕುಲಕರ್ಣಿ, ಡಾ.ಸಿ.ಬಿ. ಹೊತಗಿ ಗೌಡ್ರ, ಜಯಂತ ಗಾವಂಕರ, ಪಿಡಿಓ ಎಂ.ಕೆ. ಹಿರೇಮಠ, ಕಾರ್ಯದರ್ಶಿ ಎನ್. ಎಂ. ಮಟ್ಟಿಮನೆ, ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.