ಶಿಗ್ಗಾವಿ: ಗ್ರಾಮಾಭಿವೃದ್ಧಿಗೆ ಯುವಶಕ್ತಿ ಸದ್ಬಳಕೆಯಾಗಬೇಕು. ಗ್ರಾಮದ ನೈರ್ಮಲ್ಯಕ್ಕಾಗಿ, ಸಾಕ್ಷರತಾ ಅಭಿವೃದ್ಧಿಗಾಗಿ ಆರೋಗ್ಯದ ತಿಳಿವಳಿಕೆ ನೀಡುವ ದಿಶೆಯಲ್ಲಿ ಯುವಕರು ಸಂಘಟಿತರಾಗಿ ಹೋರಾಟ ಮಾಡ ಬೇಕಾಗಿದೆ ಎಂದು ರಂಭಾಪುರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಎಸ್.ವಿ.ಕೂಗುಮಠ ಹೇಳಿದರು.
ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ತಾಲ್ಲೂಕಿನ ಕಾಮನಹಳ್ಳಿ ಗ್ರಾಮದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಗ್ರಾಮದ ಅಭಿವೃದ್ಧಿಗೆ ಚಿಂತನೆ ಮಾಡಬೇಕಾಗಿದೆ ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ. ಜಾತಿ, ಮತ, ಪಂತಗಳ ವಿರುದ್ಧ ಧ್ವನಿಯೆತ್ತಿ ಮಾನವೀಯ ಮೌಲ್ಯಗಳನ್ನು ನಾಡಿಗೆ ಸಾರಬೇಕಾಗಿದೆ ಎಂದು ಹೇಳಿದರು.
ಸಾಹಿತಿ ಡಾ. ಶ್ರಿಶೈಲ ಹುದ್ದಾರ ಮಾತನಾಡಿ, ಗ್ರಾಮದ ಸಾಂಸ್ಕೃತಿಕ ಸಂಪತ್ತು ವಿನಾಶದ ಅಂಚಿನಲ್ಲಿದೆ. ಗ್ರಾಮೀಣ ಕಲೆಗಳ ಅವಸಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಧುನಿಕ ತಂತ್ರಜ್ಞಾನದ ವ್ಯಾಮೋಹಕ್ಕೆ ಒಳಗಾಗುವ ಜೊತೆಗೆ ದೇಶಿ ಕಲೆಗಳಾದ ದೊಡ್ಡಾಟ, ಸಣ್ಣಾಟ ಹಾಗೂ ಜನಪದ ಕುಣಿತ ಹಾಗೂ ಸಾಂಪ್ರದಾಯಿಕ ಗೀತೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದ ಅವರು, ಗ್ರಾಮೀಣ ನೈರ್ಮಲ್ಯದ ಜಾಗೃತಿಗಾಗಿ ಬೀದಿನಾಟಕಗಳ ಮೂಲಕ ಜನತೆಗೆ ಅರಿವು ನೀಡಿಸುವ ಕಾರ್ಯ ಅಗತ್ಯವಾಗಿದೆ ಎಂದರು.
ಗ್ರಾ.ಪಂ ಸದಸ್ಯ ಗಂಗಪ್ಪ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ನಕಲಪ್ಪ ಬಸರಿಕಟ್ಟಿ, ಮಲ್ಲಮ್ಮ ಕಿಳ್ಳಿಕ್ಯಾತರ, ಅನ್ನಪೂರ್ಣ ಸಪ್ಪಣ್ಣವರ, ಹನಮಂತಪ್ಪ ಗುಳೇದ, ಪಕ್ಕೀರಪ್ಪ ಕಿಳ್ಳಿಕ್ಯಾತರ, ಪ್ರೊ. ವಿ.ಬಿ.ಕ್ಯಾತಪ್ಪನವರ, ಪ್ರೊ. ಬಿ.ಎಂ. ಮುಳಗುಂದ,ಪ್ರೊ. ಪಿ.ಸಿ.ಹಿರೇಮಠ, ಪ್ರೊ. ಎಚ್.ಡಿ.ದೇವಿಹೊಸುರ, ಚಂದ್ರು ಯಲಿಗಾರ, ಉಮೇಶ ಗುಂಡಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎನ್ಎಸ್ಎಸ್ ಅಧಿಕಾರಿ ಪ್ರೊ. ಎಸ್.ಎಸ್. ಮಲ್ಲಾಡದ ಸ್ವಾಗತಿಸಿದರು. ಮಂಜುನಾಥ ಭದ್ರಶೆಟ್ಟಿ ನಿರೂಪಿಸಿದರು. ಬಿ.ಜಿ.ತೋಟದ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.