ADVERTISEMENT

ಜೀವಿವೈವಿಧ್ಯ, ಪರಿಸರ ಶಿಬಿರ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 6:35 IST
Last Updated 21 ಫೆಬ್ರುವರಿ 2012, 6:35 IST

ಹಾವೇರಿ: ಜೀವ ವೈವಿಧ್ಯದ ಪ್ರಾಮುಖ್ಯತೆ ಹಾಗೂ ಅವುಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು  ಫೆ.21 ಮತ್ತು 22 ರಂದು ಎರಡು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಪರಿಸರ ಶಿಬಿರವನ್ನು ತಾಲ್ಲೂಕಿನ ಕರಡಿಗುಡ್ಡ ಅರಣ್ಯದಲ್ಲಿ ಆಯೋಜಿಸಲಾಗಿದೆ.

ಹಾಗೂ ಅಂತರರಾಷ್ಟ್ರೀಯ ಜೀವ ವೈವಿಧ್ಯ ಹಾಗೂ ಅರಣ್ಯ ವರ್ಷಾಚರಣೆ ಅಂಗವಾಗಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬೆಂಗಳೂರಿನ ರಾಜ್ಯ ವಿಜ್ಞಾನ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾವೇರಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ, ಕರಾವಿಪ ಜಿಲ್ಲಾ ಘಟಕ ಹಾಗೂ ಸ್ಥಳಿಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆಯುವ ಶಿಬಿರದ ಉದ್ಘಾಟನೆ ಮಂಗಳವಾರ ನೆರವೇರಲಿದೆ.

ಶಿಬಿರದಲ್ಲಿ ವನ್ಯ ಗಿಡಗಳ ಲಕ್ಷಣಗಳು, ಜಲಚರ ವೈವಿಧ್ಯ, ಮರ, ಕುರುಚಲು, ಔಷಧಿ ಗಿಡ, ಗೆಡ್ಡೆ, ಹುಲ್ಲು, ಬಳ್ಳಿ, ಮಣ್ಣಿನ ವೈವಿಧ್ಯ, ಪ್ರಾಣಿ ಪಕ್ಷಿ, ಕ್ರೂರ ಪ್ರಾಣಿ ಪಕ್ಷಿ, ಉರಗ, ಉಭಯವಾಸಿ, ಸಾಕು ಪ್ರಾಣಿ ಪಕ್ಷಿ, ಮೀನು ವೈವಿಧ್ಯ, ಕೀಟ ಪ್ರಪಂಚ, ಕಳೆ ಗಿಡಗಳು, ಮರ, ಮಟ್ಟು, ದಿಮ್ಮಿ, ಪರಿಮಳ ಸೂಸುವ ಗಿಡ, ಆಲಂಕಾರಿಕ ಗಿಡ, ಹಣ್ಣುಗಳ ವಿಧ, ಬೆಳೆ ವೈವಿಧ್ಯವನ್ನು ಗುರುತಿಸಿ ಅವುಗಳ ಗುಣಗಳನ್ನು ಪ್ರಾಯೋಗಿಕವಾಗಿ ದಾಖಲಿಸುವ ಪ್ರಯತ್ನವನ್ನು ಮಾಡಲಾಗುವುದು.

ತಜ್ಞರಾಗಿ ಭಾರತೀಯ ವಿಜ್ಞಾನ ಮಂದಿರದ ಹಿರಿಯ ಪರಿಸರ ವಿಜ್ಞಾನಿ ಡಾ. ಹರೀಶ ಭಟ್, ಸರಿಸೃಪ ತಜ್ಞ ಡಾ. ಕಾರ್ತಿಕಕುಮಾರ, ಸಿಂಡಿಕೆಟ್ ಸದಸ್ಯೆ ಮಾಧುರಿ ದೇವದರ, ಉಪಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ವಿ.ಎಲ್. ರಿತ್ತಿಮರಿಯಣ್ಣನವರ ಹಾಗೂ ಎ. ಬಿ. ಮೋರಪ್ಪನವರ, ದೇವಿಹೊಸೂರ ತೋಟಗಾರಿಕಾ ಸಂಶೋಧನಾ ಕೇಂದ್ರದ ಕೀಟ ತಜ್ಞ ಡಾ.ಎಂ.ಎಚ್. ತಟಗಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಪ್ರೊ. ಸಿ.ಡಿ.ಪಾಟೀಲ ಇವರು ಮಾರ್ಗದರ್ಶಕರಾಗಿ ಆಗಮಿಸಲಿದ್ದಾರೆ.

ಫೆ. 21 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಯಲ್ಲಿ ಜರುಗುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ನೆಹರೂ ಓಲೇಕಾರ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷೆ ಗದಿಗೆವ್ವ ಶಿ.ಬಸನಗೌಡ್ರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ. ಶೋಭಾ ನಿಸ್ಸೀಮಗೌಡ್ರ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಬಿ.ಕೊಡ್ಲಿ, ಡಯಟ್ ಪ್ರಾಚಾರ್ಯ ಎಂ.ಡಿ.ಬಳ್ಳಾರಿ, ಜಿಲ್ಲಾ ವಾರ್ತಾ ಅಧಿಕಾರಿ ಸಿ.ಪಿ.ಮಾಯಾಚಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮಶೆಟ್ಟಿ, ನೇತ್ರದಾನ ಪ್ರೇರಣಾ ಸಂಸ್ಥೆ ಅಧ್ಯಕ್ಷ ಪ್ರಭಾಕರರಾವ್ ಮಂಗಳೂರು, ಡಾ.ರಾಜಕುಮಾರ ಮರೋಳ, ವಿಷಯ ಪರಿವೀಕ್ಷಕ ಆರ್. ಎನ್.ಹುರಳಿ, ಎ.ಎಂ.ಅಲಿ ಆಗಮಿಸಲಿದ್ದಾರೆ.

ಸುತ್ತೋಲೆ ಕಳಿಸಿರುವ ಶಾಲೆಗಳು ಭಾಗವಹಿಸಿ ಪ್ರಯೋಜನೆ ಪಡೆಯಲು ಹಾಗೂ ವಿವರಗಳಿಗೆ ಜಿಲ್ಲಾ ಸಂಯೋಜಕ ಆರ್.ಎಸ್.ಪಾಟೀಲ (94488 67705) ರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.