ಹಿರೇಕೆರೂರ: ರಾಷ್ಟ್ರೀಯ ತೋಟಗಾರಿಕಾ ಮಂಡಳಿ (ಎನ್ಎಚ್ಬಿ) ಯೋಜನೆಯಲ್ಲಿ ತೋಟಗಾರಿಕೆಗಾಗಿ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದಿರುವ ಸಾಲ ಹಾಗೂ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ತೋಟಗಾರಿಕಾ ರೈತರು ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ಕೃಷಿಕರಾದ ವಕೀಲ ಸಂಜೀವಯ್ಯ ಕಬ್ಬಿಣಕಂತಿಮಠ, `ತೋಟಗಾರಿಕೆ ಮಾಡಿಕೊಂಡ ಆರ್ಥಿಕವಾಗಿ ಸದೃಢರಾಗುವ ಉದ್ದೇಶದಿಂದ 2007ರಲ್ಲಿ ಜಾರಿಗೆ ಬಂದಿರುವ ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಯೋಜನೆಯಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಚಿಕ್ಕು, ಮಾವು ಮುಂತಾದವುಗಳನ್ನು ಬೆಳೆದಿದ್ದಾರೆ. ಆದರೆ ಇವು ಫಲ ಬಿಡುವ ಮೊದಲೇ ಮಾಡಿರುವ ಸಾಲಕ್ಕೆ ಶೇ.12.5ರಷ್ಟು ಬಡ್ಡಿಯಂತೆ ರೂ.5ಲಕ್ಷ ಸಾಲಕ್ಕೆ ರೂ.4ಲಕ್ಷ ಬಡ್ಡಿ ಬೆಳೆದಿದೆ. ರೂ.7ಲಕ್ಷ ಸಾಲಕ್ಕೆ ರೂ.5ಲಕ್ಷ ಬಡ್ಡಿ ಬೆಳೆದಿದೆ' ಎಂದು ತಿಳಿಸಿದರು.
`ಭಾರಿ ಕನಸಿನೊಂದಿಗೆ ತೋಟಗಾರಿಕೆ ಮಾಡಿರುವ ರೈತರು ಫಲ ಸಿಗುವ ಮೊದಲೇ ದ್ವಿಗುಣಗೊಂಡಿರುವ ಸಾಲದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ತೀರಿಸುವುದು ಹೇಗೆ ಎಂಬ ಚಿಂತೆಗೀಡಾಗಿದ್ದಾರೆ.
ಈ ರೈತರಿಗೆ ಸರ್ಕಾರದ ಯಾವುದೇ ಸಾಲಮನ್ನಾ ಯೋಜನೆಯ ಲಾಭವೂ ಆಗಿಲ್ಲ. ಕಾರಣ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದಿರುವ ತೋಟಗಾರಿಕೆ ಸಾಲ ಹಾಗೂ ಬಡ್ಡಿಯನ್ನು ಮನ್ನಾ ಮಾಡಬೇಕು. ಸಾಲಮನ್ನಾ ಸಾಧ್ಯವಾಗದಿದ್ದಲ್ಲಿ ಬಡ್ಡಿ ಮನ್ನಾ ಮಾಡಿ, 8ನೇ ವರ್ಷದಿಂದ ಸಾಲದ ಕಂತುಗಳನ್ನು ತುಂಬಲು ಆರಂಭಿಸುವ ವ್ಯವಸ್ಥೆ ಕಲ್ಪಿಸಬೇಕು' ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಶಾಸಕ ಯು.ಬಿ.ಬಣಕಾರ, `ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ. ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು' ಎಂದು ಭರವಸೆ ನೀಡಿದರು.
ರೈತರ ಮುಖಂಡರಾದ ರಾಜಶೇಖರ ಪಾಟೀಲ, ಮಹೇಶ ಗುಬ್ಬಿ, ಮಹೇಂದ್ರ ಬಡಳ್ಳಿ, ಸಿದ್ಧನಗೌಡ ನರೇಗೌಡ್ರ, ಶಿವರಾಜ ಹರಿಜನ, ವರದರಾಜ ಪಾಟೀಲ, ಮೋಹನಗೌಡ ಪಾಟೀಲ, ಮಲ್ಲಿಕಾರ್ಜುನ ಬುಡರೀಕಟ್ಟಿ, ರಾಮು ಚಿಗಮರದ, ಎಸ್.ಬಿ. ದೀವಿಗಿಹಳ್ಳಿ, ಪ್ರಭು ಮಳವಳ್ಳಿ, ಚನ್ನಬಸಪ್ಪ ಭೋಗಾವಿ, ನಿಂಗಪ್ಪ ದಂಡಿಗೀಹಳ್ಳಿ, ರಘು ಮಾಳಮ್ಮನವರ, ಶಿವಕುಮಾರ ತಿಪ್ಪಶೆಟ್ಟಿ, ಮಂಜಪ್ಪ ಬೇವಿನಹಳ್ಳಿ, ವಸಂತ ತಾಟೇರ, ಜಿ.ಎಸ್.ಮತ್ತೂರ, ಮಾದೇವಪ್ಪ ಮಾಳಮ್ಮನವರ, ಶಂಕರ ಗೌಡ ಪಾಟೀಲ, ಚಂದ್ರಶೇಖರ ಆರೇರ, ಪ್ರದೀಪ ಪಾಟೀಲ, ಆರ್.ಎಲ್. ಕಬ್ಬಿಣಕಂತಿಮಠ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.