ADVERTISEMENT

ನೀರಿನ ದಾಹ ಇಂಗಿಸುವ ಮೊಬೈಲ್ ಅರವಟ್ಟಿಗೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 5:55 IST
Last Updated 6 ಜೂನ್ 2011, 5:55 IST
ನೀರಿನ ದಾಹ ಇಂಗಿಸುವ ಮೊಬೈಲ್ ಅರವಟ್ಟಿಗೆ
ನೀರಿನ ದಾಹ ಇಂಗಿಸುವ ಮೊಬೈಲ್ ಅರವಟ್ಟಿಗೆ   

ಹಾವೇರಿ: ಹಿಂದೆ ವಾಹನ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಒಂದು ಊರಿ ನಿಂದ ಇನ್ನೊಂದು ಊರಿಗೆ ನಡೆದುಕೊಂಡು ಪ್ರಯಾಣಿಸುವುದು ಸಾಮಾನ್ಯವಾಗಿತ್ತು. ಇಂತಹ ಪ್ರಯಾಣಿಕರಿಗೆ ಮಾರ್ಗ ಮಧ್ಯದಲ್ಲಿ ಬಾಯಾರಿಕೆಯಾದರೆ, ಅಲ್ಲಲ್ಲಿ ನಿರ್ಮಿಸು ತ್ತಿದ್ದ ನೀರಿನ ಅರವಟ್ಟಿಗೆಗಳು ಅವರ ದಾಹವನ್ನು ತಣಿಸುತ್ತಿದ್ದವು.

ಈ ದಿನಗಳಲ್ಲಿ ಸಣ್ಣ ಗ್ರಾಮಗಳಿಗೂ ವಾಹನ ವ್ಯವಸ್ಥೆ ಇದೆ. ಹೀಗಾಗಿ ನಡೆದುಕೊಂಡು ಪ್ರಯಾಣ ಮಾಡುವುದು ಹಾಗೂ ದಾರಿಯಲ್ಲಿ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸುವುದು ಸಂಪೂರ್ಣ ನಿಂತೇ ಹೋದಂತಾಗಿದೆ.

ಇಲ್ಲೊಬ್ಬ ಟಂಟಂ ವಾಹನದ ಚಾಲಕ `ಮೊಬೈಲ್ ನೀರಿನ ಅರವಟ್ಟಿಗೆ~ ನಿರ್ಮಿಸುವ ಮೂಲಕ ಬಾಯಾರಿಕೆ ಯಿಂದ ಬಳಲುವ ಪ್ರಯಾಣಿಕರ ದಾಹ ಇಂಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ನೀರಡಿಕೆಯಾದ ಪ್ರಯಾಣಿಕರು ನೀರನ್ನು ಹುಡುಕಿಕೊಂಡು ಹೋಗುವ ಬದಲು, ಅವರ ಬಳಿಯೇ ನೀರನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ ಯನ್ನು ಇವರು ಮಾಡಿದ್ದಾರೆ. ಬೇಸಿಗೆ ಕಾಲದಲ್ಲಿ ಅಷ್ಟೇ ಅಲ್ಲದೇ ವರ್ಷವಿಡಿ ಈ ಅರವಟ್ಟಿಗೆ ಕಾರ್ಯ ನಿರ್ವಹಿಸುತ್ತಿರು ವುದು ಇನ್ನೊಂದು ವಿಶೇಷ.

ಹಾವೇರಿ ಸಮೀಪದ ದೇವಗಿರಿ ಗ್ರಾಮದ ಟಂಟಂ ಚಾಲಕ ಸೋಮು ನಾಗಪ್ಪ ಹಲಸೂರು ಎಂಬುವವರೇ ಮೊಬೈಲ್ ನೀರಿನ ಅರವಟ್ಟಿಗೆ ನಿರ್ಮಿಸಿದವರು. ಸ್ವಂತ ಟಂಟಂ ಹೊಂದಿ ರುವ ಇವರು, ಒಮ್ಮೆ ಪ್ರಯಾಣಿಕರು ನೀರಿನ ದಾಹದಿಂದ ತೀವ್ರ ಬಳಲಿ ತೊಂದರೆ ಪಡುತ್ತಿರುವುದನ್ನು ಮಮ್ಮಲ ಮರುಗಿದ್ದಾರೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ವಿಚಾರ ಮಾಡಿದಾಗ ಈ ಅರವಟ್ಟಿಗೆ ನಿರ್ಮಿಸುವ ವಿಚಾರ ಹೊಳೆದಿದೆ. ತಡ ಮಾಡದೇ ತನ್ನ ಟಂಟಂ ವಾಹನದ ಮೇಲೊಂದು 20 ಲೀಟರ್ ನೀರಿನ ಸಾಮರ್ಥ್ಯದ ಸಿಂಟೆಕ್ಸ್ ಅಳವಡಿಸಿದ್ದಾ ರಲ್ಲದೇ, ಸಿಂಟೆಕ್ಸ್‌ಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಿ ವಾಹನದ ಎಡ ಭಾಗದಲ್ಲಿ ನಲ್ಲಿಯನ್ನು ಅಳವಡಿಸಿದ್ದಾರೆ. ಅದೇ ಪೈಪ್‌ಗೆ ಎರಡು ಲೋಟಗಳನ್ನು ಕಟ್ಟಿದ್ದಾರೆ. ವಾಹನ ನಿಂತಾಗ ಯಾರು ಬೇಕಾದರೂ ನಲ್ಲಿಯನ್ನು ಚಾಲು ಮಾಡಿ ನೀರು ಕುಡಿಯುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಆರು ತಿಂಗಳಿನಿಂದ ಸೇವೆ: ಏಳು ತಿಂಗಳ ಹಿಂದೆ ಹೊಸ ಟಂಟಂ ಖರೀದಿಸಿರುವ ಸೋಮು, ವಾಹನ ಬಂದ ಒಂದೇ ತಿಂಗಳಿನಲ್ಲಿ ಈ ನೀರಿನ ಅರವಟ್ಟಿಗೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಕಳೆದ ಆರು ತಿಂಗಳಿನಿಂದ ಈ ನೀರಿನ ಅರವಟ್ಟಿಗೆ ಸೇವೆ ನಿತ್ಯ ನಿರಂತರವಾಗಿದೆ.

ಪ್ರತಿ ದಿನ ದೇವಗಿರಿಯಿಂದ ಹಾವೇರಿ ಬಸ್ ನಿಲ್ದಾಣದವರೆಗೆ ಟಂಟಂ ವಾಹನ ಓಡಿಸುವ ಇವರು, ಬೆಳಿಗ್ಗೆ ಮೊದಲ ಟ್ರಿಪ್ ಆರಂಭಿಸುವ ಮುನ್ನವೇ ಮನೆ ಯಲ್ಲಿ ಸಿಂಟೆಕ್ಸ್ ತುಂಬಿಸಿಕೊಂಡು ಹೊರಡುತ್ತಾರೆ. ಅದು ಮಧ್ಯಾಹ್ನದ ಷ್ಟೊತ್ತಿಗೆ ಖಾಲಿ ಆಗುತ್ತದೆ. ಮಧ್ಯಾಹ್ನ ಊಟಕ್ಕೆ ಮನೆಗೆ ಹೋದಾಗ ಮತ್ತೊಮ್ಮೆ ಸಿಂಟೆಕ್ಸ್ ಭರ್ತಿ ಮಾಡುತ್ತಾರೆ. ಹೀಗೆ ದಿನಕ್ಕೆ ಎರಡು ಬಾರಿ ಟ್ಯಾಂಕ್ ತುಂಬಿಸಿಕೊಂಡು ಜನರ ದಾಹ ಇಂಗಿಸುತ್ತಾರೆ.

ಪ್ರಯಾಣಿಕರಿಗೆ ಅಷ್ಟೇ ಅಲ್ಲದೇ ಬಾಯಾರಿಕೆ ಎಂದು ಬರುವ ಸಾರ್ವಜನಿರಿಗೂ ತಮ್ಮ ನೀರಿನ ಅರವಟ್ಟಿಗೆಯಿಂದ ಅನುಕೂಲವಾಗಿದೆ. ಇದನ್ನು ತನ್ನ ವಾಹನ ಇರುವವರೆಗೆ ಮುಂದುವರೆಸುವ ವಿಚಾರವಿದೆ ಎಂದು ಹೇಳುತ್ತಾರೆ ಟಂಟಂ ಚಾಲಕ ಸೋಮು.

ಶ್ಲಾಘನೀಯ: ಅವಸರದಲ್ಲಿ ಊರಿಗೆ ಹೊರಟಾಗ ಮಕ್ಕಳು ನೀರು ಕೇಳಿದರೆ ಕೊಡಿಸಲಾಗದೇ ತೊಂದರೆ ಅನುಭವಿಸುವವರಿಗೆ ವಾಹನದಲ್ಲಿ ನೀರು ಒದಗಿಸುತ್ತಿರುವ ಈ ಚಾಲಕನ ಕಾರ್ಯ ಮೆಚ್ಚುವಂತಹದ್ದು ಎಂದು ಪ್ರಯಾಣಿಕ ಎಂ.ಬಸವರಾಜ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.