ADVERTISEMENT

ಪಹಣಿ ದಾಖಲಾತಿ, ಬೆಳೆ ಕಟಾವು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 6:49 IST
Last Updated 12 ಡಿಸೆಂಬರ್ 2013, 6:49 IST

ಹಾನಗಲ್‌:ತಾಲ್ಲೂಕಿನ ಗ್ರಾಮ ಲೇಕ್ಕಾಧಿಕಾರಿಗಳು, ಸಹಾಯಕ ಕೃಷಿ, ತೋಟಗಾರಿಕೆ ಅಧಿಕಾರಿಗಳು, ನೀರಾವರಿ ಇಲಾಖೆ ಎಂಜಿನಿಯರ್‌ ಮತ್ತು ಕಂದಾಯ ನಿರೀಕ್ಷಕರಿಗೆ ಇಲ್ಲಿನ ತಹಶೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಮಂಗಳವಾರ ಸಂಜೆ 2013–14 ನೇ ಸಾಲಿನ ಪಹಣಿ ದಾಖಲಾತಿ ಮತ್ತು ಬೆಳೆ ಕಟಾವು ಪ್ರಯೋಗಗಳ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್‌ ಡಾ.ನಾಗೇಂದ್ರ ಹೊನ್ನಳ್ಳಿ, ಸರ್ಕಾರ ಕೃಷಿ ಅಭಿವೃದ್ಧಿಗಾಗಿ ರೂಪಿಸುವ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳಲು ಕೃಷಿ ಕ್ಷೇತ್ರದ ಅಂಕಿ ಅಂಶಗಳು ಮಹತ್ವ ಪಡೆದಿವೆ. ಈ ಕಾರ್ಯಕ್ಕೆ ಸಂಬಂಧಿಸಿದ ಕಾರ್ಯಪಾಲಕರು ಮತ್ತು ಮೇಲ್ವಿಚಾರಕರು ನೈಜ ಸ್ಥಿತಿಗತಿಯನ್ನು ದಾಖಲಿಸುವುದು ಅಗತ್ಯವಾಗಿದೆ ಎಂದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಸ್‌.ಎಚ್‌.ಪಾಟೀಲ, ಪಹಣಿ ಮತ್ತು ಬೆಳೆ ಕಟಾವ್‌ ಪ್ರಯೋಗವನ್ನು ಸಮರ್ಥವಾಗಿ ನಡೆಸುವ ಮೂಲಕ ನಿಗದಿತ ಸಮಯಕ್ಕೆ ವರದಿ ನೀಡಬೇಕು ಎಂದು ಕರೆ ನೀಡಿದರು. ಸಹಾಯಕ ನಿರ್ದೇಶಕ ಎಚ್‌.ವೈ.ಮೀಶಿ ಕಾರ್ಯಾಗಾರದಲ್ಲಿ ತರಬೇತಿ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಅಮೃತೇಶ್ವರ ಹಾಜರಿದ್ದರು. ಸಾಂಖ್ಯಿಕ ನಿರೀಕ್ಷಕ ಸಿ.ಎ.ನಂದಯ್ಯನವರ ಸ್ವಾಗತಿಸಿದರು. ಎಸ್‌.ಜೆ.ನಾಯಕವಾಡಿ ನಿರ್ವಹಿಸಿದರು. ನಂತರ ತಾಲ್ಲೂಕಿನ ಮಲ್ಲಿಗಾರ ಗ್ರಾಮದ ಸಮೀಪದ ಭತ್ತದ ಬೆಳೆಯ ಜಮೀನಿಗೆ ತೆರಳಿ ಭತ್ತದ ಬೆಳೆ ಕಟಾವ್‌ ಕ್ಷೇತ್ರ ಕಾರ್ಯಾಗಾರವನ್ನು ನಡೆಸಲಾಯಿತು. ಸಹಾಯಕ ಸಾಂಖ್ಯಿಕ ಅಧಿಕಾರಿ ಎಂ.ಎ.ಅಗಸರ ಮತ್ತು ಪಿ.ಎಚ್‌.ಶ್ಯಾಗೋಟಿ  ಬೆಳೆ ಕಟಾವ್‌ ಪ್ರಾತ್ಯಕ್ಷಿಕೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT