ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ 16 ಮನೆಗಳು ಭಾಗಶಃ ಹಾನಿಯಾಗದ್ದು, ಸುಮಾರು 9.86 ಎಕರೆ ತೋಟಗಾರಿಕಾ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ತನಕ ಕಳೆದ 24 ಗಂಟೆಗಳಲ್ಲಿ ಸರಾಸರಿ 21.08 ಮಿ.ಮೀ ಮಳೆ ಬಿದ್ದಿದೆ.
ಸವಣೂರಿನಲ್ಲಿ ಗರಿಷ್ಠ 67.7 ಮಿ.ಮೀ ಹಾಗೂ ಹಿರೇಕೆರೂರಿನಲ್ಲಿ ಕನಿಷ್ಠ 3.6 ಮಿ.ಮೀ, ಶಿಗ್ಗಾವಿ– 31.6, ಹಾವೇರಿ–22.4, ಹಾನಗಲ್– 10.4, ಬ್ಯಾಡಗಿ– 6.6 ಮತ್ತು ರಾಣೆಬೆನ್ನೂರಿನಲ್ಲಿ 5.3 ಮಿ.ಮೀ ಮಳೆಯಾಗಿದೆ.ಸೋಮವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಆದರೆ, ನಿರೀಕ್ಷೆಯಂತೆ ಮಳೆ ಸುರಿಯಲಿಲ್ಲ.
ಮರಗಳು ಧರೆಗೆ
ಸವಣೂರ: ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಎರಡು ಮರಗಳು ಹಾಗು ಒಂಬತ್ತು ಕಂಬಗಳು ಧರೆಗುರುಳಿವೆ. ಎರಡು ಮನೆಗಳ ಚಾವಣಿ ಹಾರಿ ಹೋಗಿದೆ.
ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿದ್ದ ದೊಡ್ಡ ಮರ ರಸ್ತೆಗೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಈ ನಡುವೆ, ಧರೆಗುರುಳಿದ ಮರ ತೆರವುಗೊಳಿಸಲು ಮುಂದಾದ ಹೆಸ್ಕಾಂ ಸಿಬ್ಬಂದಿಗೆ ಅಂಚೆ ಕಚೇರಿಯ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಪೊಲೀಸ್ ಅಧಿಕಾರಿಗಳ ಮಧ್ಯ ಪ್ರವೇಶಿಸಿ ಮರ ತೆರವಿಗೆ ಅನುಕೂಲ ಮಾಡಿಕೊಟ್ಟರು. ಭಾನುವಾರ ತಡರಾತ್ರಿ ತನಕ ಕಾರ್ಯಾಚರಣೆ ಮುಂದುವರಿದಿತ್ತು.
ಬಿರುಗಾಳಿಯ ಹೊಡೆತಕ್ಕೆ ಪಟ್ಟಣದ ಕೊಳೆಗೇರಿ ಪ್ರದೇಶದ ಖಾದರಬಾಗ ಓಣಿಯಲ್ಲಿ ಎರಡು ಮನೆಗಳ ಚಾವಣಿ ಹಾರಿ, ಎದುರಿನ ಮನೆಗಳ ಮೇಲೆ ಬಿದ್ದಿದೆ. ಅದರ ಪರಿಣಾಮ ನೀರಿನ ಟ್ಯಾಂಕ್ ಹಾಗೂ ಹೆಂಚುಗಳು ಒಡೆದು ಅಪಾರ ನಷ್ಟ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.