ಹಾವೇರಿ: ‘ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಜನತೆಗೆ ಒಳಿತಾದ ಒಂದೇ ಒಂದು ಯೋಜನೆಯನ್ನು ಹೇಳಿ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಕಿಲ್ ಇಂಡಿಯಾ’ದಿಂದ 10 ಲಕ್ಷ ಉದ್ಯೋಗ ಸೃಷ್ಟಿ ಎಂದು ಮೋದಿ ಭರವಸೆ ನೀಡಿದರು. ದೇಶದಲ್ಲಿ ಈಗಾಗಲೇ 2.5 ಲಕ್ಷ ಉದ್ಯೋಗ ಕಡಿತವಾಗಿದೆ. ಇದು ‘ಕಿಲ್ ಇಂಡಿಯಾ’ ಆಗಿದೆ.
ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುವುದನ್ನು ನಿಷೇಧಿಸಿದರು. ಸಣ್ಣ ರೈತರಲ್ಲಿನ ವಯಸ್ಸಾದ, ಹಾಲು ಕೊಡದ ಹಸುಗಳಿಗೆ ಏನು ಪರಿಹಾರ ಮಾಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ‘ನೋಟು ರದ್ಧತಿ’ ಎಂದರು. ಆದರೆ, ₹2 ಸಾವಿರ ಮುಖಬೆಲೆ ನೋಟು ಆರಂಭಿಸಿ, ಹಣ ಸಾಗಾಟಕ್ಕೆ ಸುಲಭ ಮಾಡಿದರು’ ಎಂದು ದೂರಿದರು.
‘ಕೇಂದ್ರದಲ್ಲಿ ಅಂದಾನಿ, ಅದಾನಿ ಮತ್ತಿತರ ಕಂಪೆನಿಗಳ ಪರ ನಿರ್ಧಾರ ಮಾಡುತ್ತಿದ್ದಾರೆ. ಜನಪರ, ಪ್ರಜಾಸತ್ತಾತ್ಮಕ ನಿರ್ಧಾರಗಳು ಬರುತ್ತಿಲ್ಲ’ ಎಂದ ಅವರು, ‘ಜಮ್ಮ ಕಾಶ್ಮೀರದಲ್ಲಿ ಸೈನಿಕರ ಮೇಲೆ ಜನ ಕಲ್ಲು ಹೊಡೆಯುವುದನ್ನು ತಡೆಯಲು ಇನ್ನೂ ಆಗಿಲ್ಲ. ಅತ್ತ ಸೈನಿಕರ ರಕ್ಷಣೆ ಮಾಡುತ್ತಿಲ್ಲ, ಇತ್ತ ಸಮಸ್ಯೆಯನ್ನೂ ಬಗೆಹರಿಸುತ್ತಿಲ್ಲ. ಸೈನ್ಯದ ಹೆಸರಲ್ಲಿ ಪ್ರಚಾರ ಪಡೆಯುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.
‘ಹೊಸ ಮನೆ ಕಟ್ಟುವಾಗ ‘ಗೋಡೆ’ ಕಟ್ಟಿ ‘ತಟ್ಟಿ’ ತೆಗೆಯಿರಿ ಎನ್ನುತ್ತಾರೆ. ಆದರೆ, ಇವರು ‘ಗೋಡೆ’ಯ ಭ್ರಮೆ ಮೂಡಿಸಿ ‘ತಟ್ಟಿ’ ತೆಗೆಯುತ್ತಾರೆ. ಬಡವರಿಗೆ ‘ಗೋಡೆ’ಯೂ ಇಲ್ಲ, ‘ತಟ್ಟಿ’ಯೂ ಇಲ್ಲ ಎನ್ನುವಂತಾಗುತ್ತಿದೆ. ಜನರ ನಿರೀಕ್ಷೆಗಳು ಸುಳ್ಳಾಗುತ್ತಿದೆ. ಆದರೆ, ಈಗ ಒಂದು ‘ಹವಾ ಹೊಂಟಿದೆ’. ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂದರು.
ರಾಜ್ಯ ರಾಜಕಾರಣ: ‘ಎಲ್ಲೆಡೆ ರಾಜ ಕಾರಣವೇ ಹೆಚ್ಚಾಗಿದ್ದು, ಜನರ ಕಳಕಳಿ ಕಡಿಮೆಯಾಗಿದೆ. ಮೌಲ್ಯಗಳೂ ಬದಲಾಗುತ್ತಿವೆ’ ಎಂದ ಅವರು, ‘ಹಿಂದೆ ಸದನದಲ್ಲಿ ಮಧ್ಯರಾತ್ರಿ ತನಕ ಗಂಭೀರ ಚರ್ಚೆ ನಡೆಯುತ್ತಿತ್ತು. ಈಗ ಧಿಕ್ಕಾರ ಕೂಗುತ್ತಾರೆ. ಸದನ ಮತ್ತು ಮುನ್ಸಿ ಪಾಲಿಟಿಗೆ ವ್ಯತ್ಯಾಸ ಇಲ್ಲದಂತಾಗಿದೆ. ಸದನದಲ್ಲಿ ಜನರ ಸಮಸ್ಯೆ, ಭಾವನೆಗಳಿಗೆ ಸ್ಪಂದಿಸಬೇಕು’ ಎಂದರು.
ಶಾಸಕ ಎನ್.ಎಚ್. ಕೋನ ರೆಡ್ಡಿ,‘ಯಾವುದೇ ಪಕ್ಷಗಳು ಜನರ ಆಹಾರ, ಭಾವನೆಯನ್ನೇ ರಾಜಕಾರಣ ಮಾಡಬಾರದು. ಇದಕ್ಕೆ ದೇಶದ ಅಭಿವೃದ್ಧಿಗೆ ಮಾರಕ’ ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರದ, ಮುಖಂಡ ರಾದ ಡಾ.ಸಂಜಯ ಡಾಂಗೆ, ಡಿ.ಎಸ್. ಮಾಳಗಿ, ಮಾಲತೇಶ ಬೇವಿನಹಿಂಡಿ, ಸಿದ್ದಬಸಪ್ಪ ಯಾದವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.