ಸವಣೂರ: `ವಿಶೇಷ ಅಗತ್ಯತೆಯ ಅವಶ್ಯಕತೆ ಇರುವ ಪ್ರತಿಯೊಂದು ಮಗುವೂ ವಿಶೇಷ ಸಾಮರ್ಥ್ಯವನ್ನೂ ಹೊಂದಿರುತ್ತದೆ. ಅದನ್ನು ಗುರುತಿಸಿ ಪ್ರೇರಣೆ ನೀಡುವ ಕಾರ್ಯ ಸಮಾಜದಿಂದ ಆಗಬೇಕಾಗಿದೆ' ಎಂದು ತಾ.ಪಂ ಅಧ್ಯಕ್ಷ ರುದ್ರಗೌಡ ಪಾಟೀಲ ತಿಳಿಸಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
`ದೈಹಿಕ ನ್ಯೂನತೆ ಹೊಂದಿರುವ ಮಕ್ಕಳ ಪಾಲಕರು ಆತಂಕ ಪಡಬೇಕಾಗಿಲ್ಲ. ಸರ್ಕಾರ ಹಾಗೂ ಸಮಾಜ ನಿಮ್ಮಂದಿಗೆ ಇದೆ' ಎಂದರು.
ಶಿಕ್ಷಣ ಇಲಾಖೆಯ ಅಧಿಕಾರಿ ಜಿ.ಕೆ.ಸುಳೇಗನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಬಿರದಲ್ಲಿ 146 ಮಕ್ಕಳ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಕಣ್ಣಿನ ದೋಷ ಹೊಂದಿರುವ 7 ಮಕ್ಕಳು, ಶ್ರವಣ ದೋಷ ಹೊಂದಿರುವ 12 ಮಕ್ಕಳು, ವಿವಿಧ ದೈಹಿಕ ನ್ಯೂನತೆ ಹೊಂದಿರುವ 29 ಮಕ್ಕಳು ಸೇರಿದಂತೆ ಒಟ್ಟು 76 ಮಕ್ಕಳು ಸಾಧನ ಸಲಕರಣೆಗಳನ್ನು ಪಡೆಯಲು ಆಯ್ಕೆಯಾದರು.
ಹುಬ್ಬಳ್ಳಿಯ ಮನೋವಿಕಾಸ ಸಂಸ್ಥೆಯ ತಜ್ಞರಾದ ವಿಜಯ ಹಿರೇಮಠ, ಡಾ.ಮನೀಶ್, ಡಾ.ಕುಮಾರಿ ಪ್ರಿಯಾಂಕಾ ಹಾಗೂ ಡಾ.ಶಿವಾ ಮಾಮರಡಿ ಮಕ್ಕಳ ತಪಾಸಣೆ ಕೈಗೊಂಡರು. ಜಿ.ಪಂ ಸದಸ್ಯ ಕೃಷ್ಣಪ್ಪ ಸುಣಗಾರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರಶಿಕ್ಷಣಾಧಿಕಾರಿ ವಿ.ಎಂ.ಮಾಳಗಿಮನಿ, ಎಚ್.ಎಂ ಪಡ್ನೇಶಿ, ಡಿ.ಎಚ್. ನರಸಣ್ಣವರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.