ADVERTISEMENT

ವೀರಭದ್ರೇಶ್ವರ, ಕಾಳಿಕಾದೇವಿ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 8:07 IST
Last Updated 6 ಡಿಸೆಂಬರ್ 2012, 8:07 IST

ಹಿರೇಕೆರೂರ: ಪಟ್ಟಣದಲ್ಲಿ ತೋಂಟದ ವೀರಭದ್ರೇಶ್ವರ ದೇವರ ಪುನರ್ ಪ್ರತಿಷ್ಠಾಪನೆ, ನೂತನ ಕಾಳಿಕಾದೇವಿ ಪ್ರತಿಷ್ಠಾಪನೆ ನಿಮಿತ್ಯ ಬುಧವಾರ ಉಭಯ ಮೂರ್ತಿಗಳ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಹಿಳೆಯರು ಕುಂಭಗಳನ್ನು ಹೊತ್ತು ಮೆವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಾದ್ಯಗಳೊಂದಿಗೆ ಕುಂಭ ಹೊತ್ತ ಮಹಿಳೆಯರು ಸಾಗುತ್ತಿದ್ದಂತೆ ಅವರ ಹಿಂದೆ ಟ್ರ್ಯಾಕ್ಟರ್‌ಗಳಲ್ಲಿ ಸುಂದರವಾಗಿ ಅಲಂಕರಿಸಿದ ವೀರಭದ್ರೇಶ್ವರ ಮತ್ತು ಕಾಳಿಕಾದೇವಿಯ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು. ಜನತೆ ತಮ್ಮ ಮನೆಗಳ ಮುಂದೆ ನೀರು ಹಾಕಿ, ಹಣ್ಣು-ಕಾಯಿ, ಕರ್ಪೂರಗಳನ್ನು ನೀಡಿ ಶ್ರದ್ಧಾ-ಭಕ್ತಿಯಿಂದ ನಮಸ್ಕರಿಸಿದರು.

ತೋಂಟದ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಪ್ರಮುಖರು, ಸ್ಥಳೀಯರು ಪಾಲ್ಗೊಂಡಿದ್ದರು. ಡಿ. 6ರಂದು ಬೆಳಿಗ್ಗೆ 10ಕ್ಕೆ ತೋಂಟದ ವೀರಭದ್ರೇಶ್ವರ ಸ್ವಾಮಿ ಮೂರ್ತಿ ಪುನರ್ ಪ್ರತಿಷ್ಠಾಪನೆ, ಕಾಳಿಕಾದೇವಿ ಪ್ರತಿಷ್ಠಾಪನೆ, ದೇವಸ್ಥಾನದ ಉದ್ಘಾಟನೆ ಹಾಗೂ ಧರ್ಮ ಸಭೆ ನಡೆಯಲಿದೆ.

ತರಬೇತಿ ಕಾರ್ಯಾಗಾರದ ಸವಣೂರ: ಸಮುದಾಯದ ಸಹಭಾಗಿತ್ವದಿಂದ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ. ಶಾಲಾ ಸಮಿತಿ, ಶಾಲೆ ಹಾಗೂ ಸಮುದಾಯದ ನಡುವೆ ಸಮನ್ವಯತೆ ಸಾಧಿಸಬೇಕು ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನೀಲಪ್ಪ ನೀಲಪ್ಪನವರ್ ತಿಳಿಸಿದರು.

ಸವಣೂರ ತಾಲ್ಲೂಕಿನ ಹುರಳಿಕೊಪ್ಪಿ ಗ್ರಾಮದ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೂರ್ವಾಚಾರಿ ಬಡಿಗೇರ ತರಬೇತಿ ಶಿಬಿರವನ್ನು ಉದ್ಘಾಟಿಸಿದರು. ಹುರಳಿಕುಪ್ಪಿ ಹಾಗೂ ತೆವರಮೆಳ್ಳಿಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಮತ್ತು ಸಿಎಸಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಸಂಪನ್ಮೂಲ ವ್ಯಕ್ತಿ ವಿ.ಆರ್. ಚರಂತಿಮಠ, ಶಿಕ್ಷಕರಾದ ಪಿ.ಕೆ. ಇಚ್ಚಂಗಿ, ಸಿ.ಎನ್. ಲಕ್ಕನಗೌಡ್ರ, ಎನ್.ಎಚ್. ಕೃಷ್ಣಣ್ಣನವರ್, ಎಸ್.ಜಿ. ಸಣ್ಣಗೌಡ್ರ ಹಾಗೂ ಹಲವಾರು ಶಾಲೆಯ ಎಸ್‌ಡಿಎಂಸಿ  ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಬ್ದುಲ್‌ರೆಹೆಮಾನ್ ತಾಡಪತ್ರಿ ನಿರೂಪಿಸಿದರು. ಎ.ಎಸ್. ಅಣ್ಣಿಗೇರಿ ಸ್ವಾಗತಿಸಿ, ಬಿ.ಡಿ ಭಜಂತ್ರಿ ವಂದಿಸಿದರು.

ಕಾನೂನು ಜಾಗೃತಿ ಶಿಬಿರ
ಸವಣೂರ
: ನಗರದ ಸಾಂತ್ವನ ಮಹಿಳಾ ಸಹಾಯವಾಣಿ, ಸ್ಪಂದನಾ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಕಾನೂನು ನೆರವು ಸಮಿತಿ ಆಶ್ರಯದಲ್ಲಿ ಕಾನೂನು ಜಾಗ್ರತಿ ಶಿಬಿರವನ್ನು ಇತ್ತಿಚಿಗೆ ಕೈಗೊಳ್ಳಲಾಯಿತು. ವರದಕ್ಷಿಣೆ ನಿಷೇಧ ದಿನಾಚರಣೆ, ಕಾನೂನು ದಿನಾಚರಣೆ ಪ್ರಯುಕ್ತ ಸವಣೂರಿನ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ  ಶಿಬಿರವನ್ನು ಜರುಗಿಸಲಾಯಿತು

ನ್ಯಾಯಾಧೀಶರಾದ ಎಸ್.ಎಲ್. ಚವ್ಹಾಣ ಕಾರ್ಯಕ್ರಮ ಉದ್ಘಾಟಿಸಿದರು. ವಿ.ಬಿ. ತುರಕಾಣಿ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಸಂಘಟಕರ ಪ್ರತಿನಿಧಿಗಳು, ತಾ.ಪಂ. ಸದಸ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ನ್ಯಾಯವಾದಿಗಳಾದ ಎಂ.ಎನ್. ರೆಡ್ಡೇರ, ಎಸ್.ಎಸ್. ಕೆರಿಯವರ್, ಜಿ.ಎಂ. ಮರಿಗೌಡ್ರ, ಪಿ.ಆರ್. ಕಲಾಲ ಉಪನ್ಯಾಸ ನೀಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವರದಕ್ಷಿಣೆ ಪಿಡುಗಿನ ಬಗ್ಗೆ ಕಿರು ನಾಟಕ ಪ್ರದರ್ಶನಗೊಂಡಿತು. ಎಂ.ಎನ್. ಹೊನಕೇರಿ ನಿರ್ವಹಿಸಿದರು. ಎನ್. ಹೊಟ್ಟಿಗೌಡರ್ ಸ್ವಾಗತಿಸಿದರು. ಎಸ್.ಎಸ್. ದಶಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.