ಹಿರೇಕೆರೂರ: ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ದೀಪೋತ್ಸವವು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಅಪಾರ ಮಾಲಾಧಾರಿಗಳು ಹಾಗೂ ಭಕ್ತರ ಜಯಘೋಷಗಳ ಮಧ್ಯೆ ವೈಭವದಿಂದ ನಡೆಯಿತು. ಬೆಳಿಗ್ಗೆ ಸ್ವಾಮಿಗೆ ತುಪ್ಪದ ಅಭಿಷೇಕ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ಸಂಜೆ ಬನ್ನಿಮಂಟಪದಿಂದ ಮೆರವಣಿಗೆ ಆರಂಭವಾಯಿತು. ಆನೆಯ ಮೇಲೆ ವಿಘ್ನೇಶ್ವರ ಭಾವಚಿತ್ರ ಹಾಗೂ ಅಯ್ಯಪ್ಪ ಸ್ವಾಮಿ ಭಾವಚಿತ್ರ ಮೆರವಣಿಗೆ ನಡೆಯಿತು.
ಮೆರವಣಿಗೆಗೆ ಗುರುಸ್ವಾಮಿ ಶಂಕರ ಶೆಟ್ಟಿ ಚಾಲನೆ ನೀಡಿ, ‘ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಸ್ವಾಮಿಯ ಮಾಲೆ ಧರಿಸುವ ಭಕ್ತರ ಅನುಕೂಲಕ್ಕಾಗಿ ವಿಶ್ರಾಂತಿ ಗೃಹ ಹಾಗೂ ಸ್ನಾನದ ಗೃಹ ನಿರ್ಮಿಸಲು ₨10 ಲಕ್ಷ ವೆಚ್ಚದ ಯೋಜನೆ ಇದೆ. ಶಾಸಕರ ಅನುದಾನದಲ್ಲಿ ₨ 2ಲಕ್ಷ ನೀಡುಬೇಕು’ ಎಂದು ಶಾಸಕ ಯು.ಬಿ.ಬಣಕಾರ ಅವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಯು.ಬಿ.ಬಣಕಾರ ಅವರನ್ನು ಸನ್ಮಾನಿಸಲಾಯಿತು. ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಸದಸ್ಯ ರಾಜಶೇಖರ ಹಂಪಾಳಿ, ರಾಘವೇಂದ್ರ ಭಟ್, ನಿಂಗಪ್ಪ ದಂಡಿಗಿಹಳ್ಳಿ ಇತರರು ಹಾಜರಿದ್ದರು. ಇದೇ 4ಕ್ಕೆ ಇರುಮುಡಿ: ಹಿರೇಕೆರೂರ ಪಟ್ಟಣದಿಂದ ಶಬರಿಮಲೈ ಯಾತ್ರೆ ಕೈಗೊಳ್ಳುವ ಮಾಲಾಧಾರಿಗಳಿಗೆ ಇದೇ 4ರಂದು ಬೆಳಿಗ್ಗೆ 7ಕ್ಕೆ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.