ADVERTISEMENT

ಶೀಘ್ರ ಐದು ತಾಳೆ ಎಣ್ಣೆ ಘಟಕ ಆರಂಭ- ಸಚಿವ ರವೀಂದ್ರನಾಥ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 5:50 IST
Last Updated 3 ಸೆಪ್ಟೆಂಬರ್ 2011, 5:50 IST

ಹಾವೇರಿ: `ರಾಜ್ಯದಲ್ಲಿ ತಾಳೆ ಎಣ್ಣೆ ತಯಾರಿಸುವ ಐದು ಹೊಸ ಘಟಕಗಳು ಶೀಘ್ರದಲ್ಲಿ ಪ್ರಾರಂಭವಾಗಲಿವೆ~ ಎಂದು ತೋಟಗಾರಿಕೆ ಹಾಗೂ ಸಕ್ಕರೆ ಸಚಿವ ಎಸ್.ಎ.ರವೀಂದ್ರನಾಥ ಹೇಳಿದರು.

ಶುಕ್ರವಾರ ತೋಟಗಾರಿಕೆ ಇಲಾ ಖೆಯ ಪ್ರಗತಿ ಪರಿಶೀಲನೆ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ತಾಳೆ ಎಣ್ಣೆ ತಯಾರಿಕಾ ಘಟಕಗಳನ್ನು ಆರಂಭಿಸಲು ಉದ್ಯಮಿ ಗಳು ಮುಂದೆ ಬಂದಿದ್ದು, ಸರ್ಕಾರದಿಂದ ಅನುಮತಿ ಕೂಡಾ ಪಡೆದುಕೊಂಡಿದ್ದಾರೆ. ಇಷ್ಟರಲ್ಲಿಯೇ ಘಟಕಗಳ ಸ್ಥಾಪನೆ ಕಾರ್ಯ ಆರಂಭವಾಗಲಿದೆ ಎಂದರು.

ಈಗಾಗಲೇ ತಾಳೆ ಎಣ್ಣೆ ತಯಾರಿಕಾ ಘಟಕಗಳು ರಾಜ್ಯದ ಹೊಸಪೇಟೆ, ಶಿವಮೊಗ್ಗ ಹಾಗೂ ಮೈಸೂರು ನಗರ ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೊಸ ಐದು ಘಟಕಗಳ ಸ್ಥಾಪನೆಯಿಂದ ರಾಜ್ಯ ದಲ್ಲಿ ಒಟ್ಟು ಎಂಟು ಘಟಕಗಳಾಗಲಿವೆ. ಇದರಿಂದ ತಾಳೆ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ತಾಳೆ ಬೆಳೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 33 ಕೋಟಿ ರೂ., ರಾಜ್ಯ ಸರ್ಕಾರ 6 ಕೋಟಿ ರೂ. ನೀಡಿವೆ. ಒಟ್ಟು 39 ಕೋಟಿ ರೂ. ಇಲಾಖೆ ಬಳಿ ಇದ್ದು, ಈ ಹಣದಿಂದ ರಾಜ್ಯದಲ್ಲಿ ತಾಳೆ ಬೆಳೆ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತೋಟಗಾರಿಕೆ ಬೆಳೆಗಳನ್ನು ಬೆಳೆ ಯುವ ರೈತರಿಗೆ ಮಾರುಕಟ್ಟೆ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಜಿಲ್ಲಾ ಮಟ್ಟ ದಲ್ಲಿ ಹಾಪ್‌ಕಾಮ್ಸ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಹಾಪ್‌ಕಾಮ್ಸ ರಾಜ್ಯ ಅಧ್ಯಕ್ಷರೊಂದಿಗೆ ಚರ್ಚಿಸ ಲಾಗಿದ್ದು, ಪ್ರತಿ ಜಿಲ್ಲೆಗೂ 50 ಲಕ್ಷ ರೂ. ಮೀಸಲಿಡಲು ಚಿಂತನೆ ನಡೆದಿದೆ ಎಂದರು.

ಕೇಂದ್ರದ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನ ವ್ಯಾಪ್ತಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಹಾಗೂ ವಿಳ್ಯದೆಲೆ ಸೇರ್ಪಡೆಯಾಗದಿರುವ ಬಗ್ಗೆ ಸಚಿವ ಗಮನ ಸೆಳೆದಾಗ, ಈ ಎರಡು ಬೆಳೆಗಳು ಈ ಜಿಲ್ಲೆ ಪ್ರಮುಖ ಬೆಳೆಗಳಾಗಿವೆ. ಇವುಗಳನ್ನು ಸೇರ್ಪಡಿಸುವುದರಿಂದ ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಗೆ ಉತ್ತೇಜನ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಇಲಾಖೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಜಿ.ಪಂ. ಅಧ್ಯಕ್ಷ ಮಂಜುನಾಥ ಓಲೇಕಾರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ದೊಡ್ಡನಗೌಡರ, ಕೃಷ್ಣ ಉಕ್ಕುಂದ ಸೇರಿದಂತೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.