ADVERTISEMENT

`ಸಮಚಿತ್ತದಿಂದ ಪರೋಪಕಾರ ರೂಢಿಸಿಕೊಳ್ಳಿ'

ಲಿಂಗೈಕ್ಯ ರುದ್ರಮುನಿ ಸ್ವಾಮೀಜಿ 29ನೇ ಪುಣ್ಯ ಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 8:19 IST
Last Updated 17 ಜೂನ್ 2013, 8:19 IST

ಸವಣೂರ: `ಸಮಚಿತ್ತ, ಸಮಭಾವಗಳೊಂದಿಗೆ ಬದುಕನ್ನು ಕಟ್ಟಿಕೊಂಡು ದುರ್ಗುಣಗಳನ್ನು ದೂರ ಸರಿಸಬೇಕು. ಉತ್ತಮ ಸಂಸ್ಕೃತಿ, ಸದಾಚಾರಗಳೊಂದಿಗೆ ಪರೋಪಕಾರದ ಪ್ರವೃತ್ತಿ ನಮ್ಮದಾಗಬೇಕು' ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹತ್ತಿಮತ್ತೂರ ಗ್ರಾಮದ ವಿರಕ್ತಮಠದಲ್ಲಿ ಜರುಗಿದ ರುದ್ರಮುನಿ ಸ್ವಾಮೀಜಿ ಅವರ 29ನೇ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

`ಅಹಂಕಾರದ ಪ್ರವೃತ್ತಿ ದುರ್ವಾಸನೆ ಇದ್ದಂತೆ. ಇದು ವ್ಯಕ್ತಿಯನ್ನು ಸಮಾಜದಿಂದ ದೂರ ಉಳಿಸುತ್ತದೆ. ವಿನಯ ಎಂಬ ಸುಗಂಧ ಜನರ ಪ್ರೀತಿ ವಿಶ್ವಾಸಗಳನ್ನು ಉಡುಗುರೆಯಾಗಿ ನೀಡುತ್ತದೆ. ನಾವು ಮಾಡುವ ಪ್ರತಿಯೊಂದು ಸತ್ಕಾರ್ಯಗಳು ಬದುಕನ್ನು ಸಾರ್ಥಕತೆಯತ್ತ ಸಾಗಿಸುತ್ತದೆ. ಶರಣರಿಗೆ ಬಾಗುವ ತಲೆ ಶುಭ ಹಾರೈಕೆಗಳನ್ನು ಹೊತ್ತುಕೊಳ್ಳುತ್ತದೆ. ಹಿರಿಯರ ಅನುಕರಣೆ ಬದುಕಿಗೆ ದಾರಿ ದೀಪವಾಗುತ್ತದೆ. ಇದರೊಂದಿಗೆ ಉತ್ತಮ ಶಿಕ್ಷಣ, ಸಂಸ್ಕಾರಗಳು ಬದುಕನ್ನು ಸರಿಯಾದ ಮಾರ್ಗದಲ್ಲಿ ಸಾಗಿಸುತ್ತವೆ' ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ರುದ್ರಪ್ಪ ಲಮಾಣಿ, `ಶ್ರೀಮಠಕ್ಕೆ ಅಗತ್ಯವಿರುವ ನೆರವು ನೀಡಲಾಗುವುದು' ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರುದ್ರಮುನೀಶ್ವರ ಕನ್ನಡ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಯೋಜನೆಗೆಚಾಲನೆ ನೀಡಲಾಯಿತು. ಸ್ಟೇಟ್ ಬ್ಯಾಕ್ ಆಫ್ ಮೈಸೂರ ಶಾಖೆಯ ವತಿಯಿಂದ ಶಾಲಾ ಕೊಠಡಿಗಳಿಗೆ 7 ಫ್ಯಾನ್‌ಗಳನ್ನು ದೇಣಿಗೆ ನೀಡಲಾಯಿತು. ಮಾತೋಶ್ರೀ ನಿಂಗಮ್ಮ ಎಸ್. ಹೂಗಾರ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.

ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿಗಳು, ಅಗಡಿ-ಗುತ್ತಲದ ಸಂಗನಬಸವ ಸ್ವಾಮೀಜಿ, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಚನ್ನವೀರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಎಸ್‌ಬಿಎಂ ಶಾಖಾ ವ್ಯವಸ್ಥಾಪಕ ರಂಜನಸಿಂಗ್, ಅಲ್ತಾಫ್ ಕುಸುಗಲ್, ಜಿ.ಪಂ ಸದಸ್ಯೆ ಸಾವಿತ್ರಾ ತಳವಾರ, ಗ್ರಾ.ಪಂ ಅಧ್ಯಕ್ಷೆ ಹಯಾತ್‌ಬಿ ಬೂದಿಹಾಳ, ಲಲಿತಾ ಕೋಳಿವಾಡ, ಝಡ್.ಜಿ ಖಾಜಿ, ಬಸವರಾಜ ಗುಮತಿಮಠ, ದಾಕ್ಷಾಯಿಣಿದೇವಿ ಪುರಾಣಿಕಮಠ, ಬಸವರಾಜ ಕಮರಿ, ಬಸವರಾಜ ಹೂಗಾರ ಮತ್ತಿತರರು ಭಾಗವಹಿಸಿದ್ದರು.

ಬಿ.ಎಂ. ಕುಲಕರ್ಣಿ, ಶ್ರೀಧರ ದೊಡ್ಮನಿ, ಹನುಮಂತಗೌಡ್ರ ಉಳ್ಳಾಗಡ್ಡಿ, ಟಿ.ಡಿ. ತಾಯಮ್ಮನವರ್, ನಾಗನಗೌಡ್ರ ನಿಂಗನಗೌಡ್ರ, ಸಿದ್ಲಿಂಗಪ್ಪ ಕರಬಸಮ್ಮನವರ, ಎಲ್.ವಿ. ನಾಯ್ಕರ್, ಫಕ್ಕೀರಸ್ವಾಮಿ ಮಟ್ಟಣ್ಣನವರ ಸೇರಿದಂತೆ ಪ್ರಮುಖರನ್ನು ಸನ್ಮಾನಿಸಲಾಯಿತು. ಜಗದೀಶ ಕಾಕಂಬಿ, ಚಂದ್ರಶೇಖರ ಕುಳೇನೂರ, ಪಿ.ಜಿ ಆರಾಧ್ಯಮಠ, ಎಸ್.ವಿ. ಕುಲಕರ್ಣಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.