ADVERTISEMENT

ಹೆಚ್ಚುತ್ತಿರುವ ಡೆಂಗೆ: ಜನತೆಯಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 8:08 IST
Last Updated 8 ಜೂನ್ 2013, 8:08 IST
ಹಾನಗಲ್ ಪಟ್ಟಣದ ಚರಂಡಿಯನ್ನು ಪೌರ ಕಾರ್ಮಿಕ ಸ್ವಚ್ಛಗೊಳಿಸುತ್ತಿರುವುದು
ಹಾನಗಲ್ ಪಟ್ಟಣದ ಚರಂಡಿಯನ್ನು ಪೌರ ಕಾರ್ಮಿಕ ಸ್ವಚ್ಛಗೊಳಿಸುತ್ತಿರುವುದು   

ಹಿರೇಕೆರೂರ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶಂಕಿತ ಡೆಂಗೆ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಕ್ಕಳಲ್ಲಿಯೇ ಹೆಚ್ಚಾಗಿ ಈ ರೋಗ ಕಾಣಿಸಿಕೊಳ್ಳುತ್ತಿರುವುದು ಭೀತಿಗೆ ಕಾರಣವಾಗಿದ್ದು, ಆರೋಗ್ಯ ಇಲಾಖೆಯ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.

ತಾಲ್ಲೂಕಿನ 15ಕ್ಕಿಂತ ಹೆಚ್ಚು ಮಕ್ಕಳು ಡೆಂಗೆ ಜ್ವರದಿಂದ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇನ್ನೂ ಅನೇಕ ಮಕ್ಕಳು ದಾವಣಗೆರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹಿರೇಕೆರೂರ, ರಟ್ಟೀಹಳ್ಳಿ, ಮಾಸೂರು, ಗುಂಡಗಟ್ಟಿ, ತಾವರಗಿ, ವೀರಾಪುರ, ಬಸರೀಹಳ್ಳಿ ಮುಂತಾದ ಗ್ರಾಮಗಳ ಅನೇಕ ಮಕ್ಕಳು ಶಂಕಿತ ಡೆಂಗೆಯಿಂದ ಚಿಕಿತ್ಸೆ ಪಡೆಯುತ್ತಿದ್ದು, ಅನೇಕರು ಚಿಕಿತ್ಸೆಯಿಂದ ಚೇತರಿಸಿಕೊಂಡು ಮನೆಗೆ ವಾಪಸು ಬಂದಿದ್ದಾರೆ.

`ಡೆಂಗೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಆದ್ದರಿಂದ ಮಣಿಪಾಲ ಅಸ್ಪತ್ರೆಯಲ್ಲಿ ನನ್ನ ಮಗ ಹನುಮಂತಗೌಡ ಸೇರಿದಂತೆ ತಾಲ್ಲೂಕಿನ 15-20 ರೋಗಿಗಳು ದಾಖಲಾಗಿದ್ದಾರೆ. ಮಣಿಪಾಲ ಸೇರಿದಂತೆ ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ಉತ್ತಮ ಚಿಕಿತ್ಸೆಯನ್ನು ಪಡೆದು ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು' ಎಂದು ತಾವರಗಿ ಗ್ರಾಮದ ಚನ್ನಬಸಪ್ಪ ಅಜ್ಜಪ್ಪನವರ `ಪ್ರಜಾವಾಣಿ'ಗೆ ತಿಳಿಸಿದರು.

ಡೆಂಗೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಆರೋಗ್ಯ ಇಲಾಖೆ ಹಾಗೂ ತಾ.ಪಂ. ಅಧಿಕಾರಿಗಳು ಹೇಳುತ್ತಿದ್ದರೂ ನಿತ್ಯ ಹೊಸಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಎಲ್ಲೆಡೆ ಉತ್ತಮ ಮಳೆ ಬಿದ್ದಿದ್ದು, ಡೆಂಗೆ ಹರಡುವ ಸೊಳ್ಳೆಗಳ ನಾಶಕ್ಕೆ ಸಹಕಾರಿಯಾಗಿದೆ ಎಂದು ಭಾವಿಸಿದರೂ ಡೆಂಗೆ ನಿಯಂತ್ರಣಕ್ಕೆ ಬಾರದೇ ಇರುವುದು ಚಿಂತೆಗೀಡು ಮಾಡಿದೆ.

ಈಗಾಗಲೇ ಶಾಸಕ ಯು.ಬಿ.ಬಣಕಾರ ತಾಲ್ಲೂಕಿನ ಎಲ್ಲ ವೈದ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ, ಡೆಂಗೆ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಬುಧವಾರ ನಡೆದ ತಾ.ಪಂ. ಸಭೆಯಲ್ಲಿಯೂ ಡೆಂಗೆ ಜ್ವರದ ಬಗ್ಗೆ ಚರ್ಚೆ ನಡೆಸಲಾಗಿದೆ. ತಾ.ಪಂ. ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಆರೋಗ್ಯ ಇಲಾಖೆ ಪ್ರತಿನಿಧಿ ಸದಸ್ಯರ ಆಕ್ರೋಶವನ್ನು ಸಹ ಎದುರಿಸಿದ ಪ್ರಸಂಗ ಸಹ ನಡೆದಿದೆ.

ಜೂನ್ 4ರವರೆಗೆ ಆರೋಗ್ಯ ಇಲಾಖೆಯ ಪ್ರಕಾರ ಡೆಂಗೆ ಸಂಶಯದ ಪ್ರಕರಣಗಳು ಕೇವಲ 22 ಆಗಿದೆ. ಇದರಲ್ಲಿ 14 ಖಚಿತ ಪ್ರಕರಣಗಳಿವೆ. 21 ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಒಬ್ಬ ರೋಗಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.