ADVERTISEMENT

‘ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಿ’

ಅಕ್ಷರ ದಾಸೋಹ ಪರಾಮರ್ಶೆ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 6:53 IST
Last Updated 10 ಜನವರಿ 2014, 6:53 IST

ಹಾವೇರಿ: ಅಕ್ಷರ ದಾಸೋಹ ಯೋಜನೆ ಅನುಷ್ಠಾನ ಗೊಳಿಸುವಲ್ಲಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ೧೮ ಶಾಲೆಗಳ ಪೈಕಿ ಕರ್ತವ್ಯಲೋಪ ಎಸಗಿರುವ ಕೆಲ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಕ್ಷರ ದಾಸೋಹ ಕಾರ್ಯಕ್ರಮದ ಪರಾಮರ್ಶೆ ಸಮಿತಿಯ ತನಿಖಾ ಸಮಿತಿ ಜಿಲ್ಲಾ ಪಂಚಾಯ್ತಿಗೆ ಶಿಫಾರಸು ಮಾಡಿದೆ.

ಜಿಲ್ಲಾ ಪಂಚಾಯಿತಿ ಸಭಾಭವನಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ  ನೇಮಕ ಮಾಡಿದ ಅಕ್ಷರ ದಾಸೋಹ ಕಾರ್ಯಕ್ರಮ ಪರಾಮರ್ಶೆ ಸಮಿತಿ ಸಲ್ಲಿಸಿದ ತನಿಖಾ ವರದಿಯಲ್ಲಿ ಮೇಲಿನ ಶಿಫಾರಸ್ಸು ಸೇರಿದಂತೆ ಅಕ್ಷರ ದಾಸೋಹ ಸುಧಾರಣೆಗೆ 11 ಶಿಫಾರಸುಗಳನ್ನು ಮಾಡಿದೆ.

ಅಕ್ಷರ ದಾಸೋಹ ಯೋಜನೆ ಒಂದು ಸಾಂಘಿಕ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳ, ಪಾಲಕರ, ಶಿಕ್ಷಕರ ಸಹಭಾಗಿತ್ವದಲ್ಲಿ ಹೆಚ್ಚಿನ ಒಲವಿರುವ ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದು ಹೇಳುವ ಮೂಲಕ ಖಾಸಗಿ ಇಲ್ಲವೇ ಶಾಲೆಗಳಲ್ಲಿಯೂ ಬಿಸಿಯೂಟ ತಯಾರಿಸಬಹುದು ಎಂಬರ್ಥದಲ್ಲಿ ಹೇಳಿದೆ.

ಆದರೆ, ಇನ್ನೊಂದು ಶಿಫಾರಸ್ಸಿನಲ್ಲಿ  ಸೇವಾ ಸಂಸ್ಥೆಗಳಿಗೆ ಬಿಸಿಯೂಟ ವಿತರಣಾ ಜವಾಬ್ದಾರಿಯನ್ನು ವಿಸ್ತರಣೆ ಮಾಡದೇ ರಾಜ್ಯ ಸರ್ಕಾರದ ಆದೇಶವನ್ನು ಅನುಷ್ಠಾನವನ್ನು ಜಿಲ್ಲಾ ಪಂಚಾಯಿತಿ  ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಹೇಳಿದೆ.

ಬ್ಯಾಡಗಿ ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆ ನೀಡುತ್ತಿರುವ ಆಹಾರದಲ್ಲಿ ಮಕ್ಕಳ ಸಂಖ್ಯೆ ಹಾಗೂ ಆಹಾರ ಪೂರೈಕೆಯಲ್ಲಿ ವ್ಯತ್ಯಾಸವಿದ್ದು, ಇದಕ್ಕೆ ಶಿಕ್ಷಕರೇ ಹೊಣೆಗಾರರಾಗಿದ್ದಾರೆ. ವ್ಯತ್ಯಾಸದ ಹಣವನ್ನು ಮರುಪಾವತಿ ಮಾಡಬೇಕು ಎಂದು ಶಿಕ್ಷಕರಿಗೆ ಸೂಚಿಸಬೇಕು.

ಹರಿಹರದ ಆದರ್ಶ ಎಜ್ಯುಕೇಶನ್ ಮತ್ತು ರೂರಲ್ ಡೆವಲಪಮೆಂಟ್ ಸೊಸೈಟಿ ೨೦-೧೧–-೨೦೧೩ರಿಂದ ಇಲಾಖಾ ಅಧಿಕಾರಿಗಳ, ಸಂಸ್ಥೆಯ ಮುಖ್ಯಸ್ಥರ ಗಮನಕ್ಕೂ ತರದಂತೆ ಆಹಾರ ಪೂರೈಕೆ ನಿಲ್ಲಿಸಿದೆ. ಕೂಡಲೇ ಇಲಾಖೆ ಸ್ವಯಂ ಸೇವಾ ಸಂಸ್ಥೆಯೊಂದಿಗಿನ  ಒಡಂಬಡಿಕೆ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.   ಇಲಾಖೆಯು ಎಲ್ಲ ಎನ್‌ಜಿಒಗಳ ಜೊತೆ ಮಾಡಿಕೊಂಡ ಒಡಂಬಡಿಕೆಯಲ್ಲಿ ಲೋಪ ದೋಷಗಳು ಹೆಚ್ಚಾಗಿವೆ.  ಅವುಗಳನ್ನು  ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವಂತೆ ಬದಲಾವಣೆ ಮಾಡಬೇಕು.

ಆದರ್ಶ ಎಜ್ಯುಕೇಶನ್ ಮತ್ತು ರೂರಲ್ ಡೆವಲಪಮೆಂಟ್ ಸೊಸೈಟಿ ಬ್ಯಾಡಗಿ ತಾಲ್ಲೂಕಿನಲ್ಲಿ ಆಹಾರ ಪೂರೈಸುವುದನ್ನು ರದ್ದುಗೊಳಿಸಬೇಕು. ಉಳಿದ ತಾಲೂಕುಗಳಲ್ಲಿ ಮುಂದುವರೆಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.

ಪರಾಮರ್ಶೆ ಸಮಿತಿಯ ತನಿಖಾ ವರದಿಯನ್ನು ಜಿ.ಪಂ.ಸದಸ್ಯ ಹಾಗೂ ಪರಾಮರ್ಶ ಸಮಿತಿ ಸದಸ್ಯ ಸಂತೋಷಕುಮಾರ ಪಾಟೀಲ ಸಭೆಗೆ ಮಂಡಿಸಿದರು. ಸರ್ವ ಸದಸ್ಯರು ವರದಿಗೆ ಒಪ್ಪಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಡಾ. ಶೋಭಾ ನಿಸ್ಸೀಮಗೌಡ್ರ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಬಿ. ಆಂಜನಪ್ಪ, ಉಪ ಕಾರ್ಯದರ್ಶಿ ಗೋವಿಂದಸ್ವಾಮಿ, ಡಿಡಿಪಿಐ ಎಸ್‌.ಬಿ.ಕೊಡ್ಲಿ ಸೇರಿದಂತೆ ಅನೇಕರು ಹಾಜರಿದ್ದರು. ­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.