ADVERTISEMENT

‘ಸಾಹಿತ್ಯ ಲೋಕಕ್ಕೆ ಬೇಂದ್ರೆ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:58 IST
Last Updated 2 ಜನವರಿ 2014, 6:58 IST

ಶಿಗ್ಗಾವಿ: ‘ಸಾಹಿತ್ಯ ಲೋಕಕ್ಕೆ ಬೇಂದ್ರೆ ಅವರ ಕೊಡುಗೆ ಅಪಾರವಾಗಿದ್ದು, ಅವುಗಳ ಅಧ್ಯಯನ ಮಾಡುವ ಮೂಲಕ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಲು ಸಾಧ್ಯ’ ಎಂದು ರಂಭಾಪುರಿ ಕಾಲೇಜಿನ ಪ್ರಾಚಾರ್ಯ ಎಸ್‌.ವಿ.­ಕುಲಕರ್ಣಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹಾಗೂ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸಹ­ಯೋಗದಲ್ಲಿ ನಡೆದ ’ಬೇಂದ್ರೆ ಕಾವ್ಯಾನುಭವ’ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.

‘ಬೇಂದ್ರೆ ಅವರ ಸರಳ ಬರವಣಿಗೆ ಪ್ರತಿಯೊಬ್ಬರಿಗೆ  ಅರ್ಥ­ವಾಗುವಂತಿದೆ. ಹೀಗಾಗಿ ಅವರ ಸಾಹಿತ್ಯದ ರಸದೌತಣ ಇಂದಿಗೂ ಸವಿಯಲು ಸಾಧ್ಯವಾಗಿದೆ’ ಎಂದರು. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮ­ಸುಂದರ ಬಿದರಕುಂದಿ ಕಾರ್ಯಕ್ರಮ ಉದ್ಘಾ­ಟಿಸಿ, ಜಗದ–ಯುಗದ ಕವಿಯ ಸಾಹಿತ್ಯವನ್ನು ಕನ್ನಡಿಗರಿಗೆ ಅರ್ಥ­ಪೂರ್ಣವಾಗಿ ಮುಟ್ಟಿಸುವ ಕಾಯಕ ಟ್ರಸ್ಟ್‌ ಮಾಡುತ್ತಿದೆ. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೈಜೋಡಿ­ಸುತ್ತಿರುವುದು ಸಂತಸದ ಸಂಗತಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಬಸರೀಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ‘ಕನ್ನಡ ಭಾಷೆ ಬಗ್ಗೆ ಬೇಂದ್ರೆಯವರಿಗೆ ಅಪಾರ ಅಭಿಮಾನವಿತ್ತು. ಅವರು ನೆಲದ ಸತ್ವವನ್ನು ಕಾವ್ಯದಲ್ಲಿ ತುಂಬಿ ಹೊಸ ದರ್ಶನವನ್ನು ಜಗಕ್ಕೆ ಸಾರಿದರು’ ಬಸರೀಕಟ್ಟಿ ಹೇಳಿದರು.

ಉಪನ್ಯಾಸಕರಾದ ಎಲ್‌.ಎ. ಹಿರೇಮಠ, ಆರ್.ಎಸ್.­ಬೂಸನಗೌಡ್ರ, ವೀರೇಶಪ್ಪ ಹಲಗೇರಿ, ಬಸನಗೌಡ ಪಾಟೀಲ, ಭೂಷಣ, ದೇಶಪಾಂಡೆ ಉಪಸ್ಥಿತರಿದ್ದರು. ಮುಕುಂದ ಕುಲಕರ್ಣಿ ಪ್ರಾರ್ಥಿಸಿದರು. ಪ್ರಾಚಾರ್ಯ ಎಂ.ಆಂಜನೇಯ ಸ್ವಾಗತಿಸಿದರು. ಉಪನ್ಯಾಸಕ ರಮಜಾನ ಕಿಲ್ಲೇದಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.