ADVERTISEMENT

ರಾಜ್ಯಮಟ್ಟಕ್ಕೆ 10 ಪುಟಾಣಿ ವಿಜ್ಞಾನಿಗಳ ಆಯ್ಕೆ

ನೈಸರ್ಗಿಕ ಸಂಪನ್ಮೂಲದ ಸದ್ಬಳಕೆ ಅಗತ್ಯ: ಎಸ್.ಬಿ.ಹೀರೆಮಠ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 16:30 IST
Last Updated 12 ಡಿಸೆಂಬರ್ 2019, 16:30 IST

ಹಾವೇರಿ: ‘ಸೂರ್ಯನಿಂದ ಮತ್ತು ಗಾಳಿಯಿಂದ ಅಗಾಧ ಶಕ್ತಿ ಲಭ್ಯವಾಗುತ್ತಿದೆ. ಮನುಕುಲದ ಒಳಿತಿಗಾಗಿ ಅದನ್ನು ಇನ್ನೂ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವತ್ತ ಸಂಶೋಧನೆಗಳಾಗಬೇಕು’ ಎಂದುಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಹಿರೇಮಠ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕ ನಗರದ ಎಸ್.ಎಂ.ಎಸ್. ಬಾಲಿಕಾ ಫ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ 10 ಪುಟಾಣಿ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಸೌರಶಕ್ತಿ ಬಳಕೆ ಮಾಡಿಕೊಳ್ಳಲಾಗುತ್ತಿದೆಯಾದರೂ ಅದು ಜನಸಾಮಾನ್ಯರಿಗೆ ನಿಲುಕದಷ್ಟು ದುಬಾರಿಯಾಗಿದೆ. ಈ ನಿಟ್ಟಿನಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ಶಕ್ತಿ ಬಿಕ್ಕಟ್ಟಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಸಂಶೋಧನೆಗೆ ಉತ್ಸುಕರಾಗಬೇಕಾಗಿದೆ’ ಎಂದು ಹೇಳಿದರು.

ADVERTISEMENT

ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಎಸ್. ಪಾಟೀಲ್ ಮಾತನಾಡಿ, ಮಕ್ಕಳಲ್ಲಿ ಅನ್ವೇಷಣೆಯ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ 27 ವರ್ಷಗಳಿಂದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ 10 ರಿಂದ 17 ವರ್ಷದೊಳಗಿನ ಯುವ ವಿಜ್ಞಾನಿಗಳು ಮಾರ್ಗದರ್ಶಿ ಗುರುಗಳ ಸಹಕಾರದಲ್ಲಿ ಸಮಾಜವನ್ನು ಕಾಡುವ ಸಮಸ್ಯೆಗಳನ್ನು ಹುಡುಕುತ್ತಾರೆ. ಸಮಸ್ಯೆಗಳಿಗೆ ಮೂಲ ಕಾರಣಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಕಂಡುಕೊಳ್ಳುತ್ತಾರೆ. ಎಲ್ಲವನ್ನೂ ಕ್ರೋಡೀಕರಿಸಿ ಸ್ವರಚಿತ ಸಂಶೋಧನಾ ಪ್ರಬಂಧ ರೂಪಿಸುತ್ತಾರೆ. ಇದುವೆ ಸಂಶೋಧನಗೆ ಮೂಲ ಪ್ರೇರಣೆ ಎಂದು ಹೇಳಿದರು.

ಪ್ರತಿ ಜಿಲ್ಲೆಯಿಂದ ಆಯ್ಕೆಯಾಗುವ 10 ಪುಟಾಣಿ ವಿಜ್ಞಾನಿಗಳು ಡಿ. 16ರಿಂದ 18 ರವರೆಗೆ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯ ಮಹಾಸಂಸ್ಥಾನ ಮಠದಲ್ಲಿ ನಡೆಯುವ ರಾಜ್ಯ ಸಮಾವೇಶದಲ್ಲಿ ತಮ್ಮ ಸಂಶೋಧನಾ ಪ್ರಬಂಧ ಮಂಡಿಸುವರು. ರಾಜ್ಯ ಸಮಾವೇಶದಲ್ಲಿ ಆಯ್ಕೆಯಾಗುವ 30 ವಿದ್ಯಾರ್ಥಿಗಳು ಡಿ.27ರಿಂದ 31ರವರೆಗೆ ಕೇರಳದ ತಿರುವನಂತಪುರದಲ್ಲಿ ನಡೆಯುವ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ, ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಬಿ.ಎಸ್.ಪಾಟೀಲ್, ಪಿ.ಬಿ.ಮುದ್ದಿ ಪಾಲ್ಗೊಳ್ಳಲಿದ್ದಾರೆ.ರೇಖಾ ನೆಲಗುಡ್ಡ, ಶಿವಾನಂದ ಪಾಯಮಲ್ಲಿ, ಆರ್.ವಿ.ಮುಗದೂರ್ ಹಾಗೂ ಎನ್.ಎಮ್.ಹೊಸರಡ್ಡಿ ತೀರ್ಪುಗಾರರಾಗಿದ್ದರು. ಎ.ಎಚ್.ಕಬ್ಬಿಣಕಂತಿಮಠ ಸ್ವಾಗತಿಸಿದರು. ಜಿ.ಎಸ್.ಹತ್ತಿಮತ್ತೂರ ನಿರೂಪಿಸಿದರು. ದಳವಾಯಿ ವಂದಿಸಿದರು. ಜಿಲ್ಲೆಯ 54 ಫ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.