ಹಾವೇರಿ: ಕಳಪೆ ಮೆಣಸಿನಕಾಯಿ ಬೀಜ ವಿತರಿಸಿ ಬೆಳೆನಷ್ಟ ಅನುಭವಿಸಲು ಕಾರಣರಾದ ಬೀಜ ಮಾರಾಟ ಮಳಿಗೆ ಮಾಲೀಕರಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಹಿರೇಕೆರೂರು ತಾಲ್ಲೂಕಿನ ಲಿಂಗಾಪುರ ಗ್ರಾಮದ ನಾಗರಾಜಪ್ಪ ಕರಿಯಪ್ಪ ಮೂಡಬಾಗಿಲ ಹಾಗೂ ಗಣೇಶ ಕರಿಯಪ್ಪ ಮೂಡಬಾಗಿಲ ಎಂಬ ರೈತರು ಯಶಸ್ವಿನಿ ಹೈಬ್ರೀಡ್ ಸೀಡ್ಸ್ ಕಂಪನಿಯ ಮೆಣಸಿನಕಾಯಿ ಬಿತ್ತನೆ ಬೀಜವನ್ನು ಖರೀದಿಸಿದ್ದರು.
ಉತ್ಪಾದಕ ಕಂಪನಿಯ ತಾಂತ್ರಿಕ ಮಾಹಿತಿಯಂತೆ ಬೆಳೆ ಬೆಳೆಸಲಾಗಿದ್ದರೂ ನಿಗದಿತ ಪ್ರಮಾಣದಲ್ಲಿ ಹೂ-ಕಾಯಿ ಬಿಡದ ಕಾರಣ ಹಾವೇರಿಯ ಗಜಾನನ ಆಗ್ರೋ ಸೆಂಟರ್ ಸಂಪರ್ಕಿಸಿದರೂ ಸರಿಯಾದ ಮಾಹಿತಿ ನೀಡದ ಕಾರಣ ಬೆಳೆ ನಷ್ಟ ಉಂಟಾಗಿದೆ ಎಂದು ಬೀಜ ಮಾರಾಟಗಾರರಾದ ಹಾವೇರಿಯ ಗಜಾನನ ಆಗ್ರೋ ಸೆಂಟರ್ ಹಾಗೂ ರಾಣೆಬೆನ್ನೂರಿನ ಮಹಾರಾಷ್ಟ್ರ ಸೀಡ್ಸ್ ಕಂಪನಿಯ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ರಾಣೆಬೆನ್ನೂರಿನ ಮಹಾರಾಷ್ಟ್ರ ಬೈಬ್ರೀಡ್ ಸೀಡ್ಸ್ ಕಂಪನಿ ಹಾಗೂ ಹಾವೇರಿ ನಗರದ ಗಜಾನನ ಆಗ್ರೋ ಸೆಂಟರ್ ವತಿಯಿಂದ ಬೆಳೆ ಹಾನಿ ನಷ್ಟ ಪರಿಹಾರವಾಗಿ ₹60 ಸಾವಿರ, ಮೆಣಸಿನಕಾಯಿ ಬೀಜ ಖರೀದಿಸಿದ ಮೊತ್ತ ₹2,280, ಪ್ರಕರಣದ ಖರ್ಚು ₹2 ಸಾವಿರ ಹಾಗೂ ಮಾನಸಿಕ ವ್ಯಥೆಗಾಗಿ ₹2 ಸಾವಿರ ಪಾವತಿಸಲು ಆದೇಶ ಹೊರಡಿಸಿದ್ದಾರೆ.
30 ದಿನದೊಳಗಾಗಿ ಪರಿಹಾರ ಪಾವತಿಸಲು ವಿಫಲವಾದರೆ ವಾರ್ಷಿಕ ಶೇ 9ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆಯೋಗ ಸೂಚನೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.