ಅಕ್ಕಿಆಲೂರು: ‘ಕನ್ನಡ ನಾಡಿನ ಮಠಗಳು ಸಮುದಾಯದಲ್ಲಿ ಮೌಲ್ಯಗಳನ್ನು ಬಿತ್ತಿ, ಬೆಳೆಯುತ್ತಿವೆ. ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತವಾಗದೇ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಿರಿಮೆ ಸಾರಿವೆ’ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ ತಾಲ್ಲೂಕಿನ ಕೂಸನೂರು ಗ್ರಾಮದ ಜಡೆಮಠದ ಶಾಖಾ ಮಠ ಶಿವಪೂಜಪ್ಪ ಮಠದ ಆವರಣದಲ್ಲಿ ಗುರುವಾರ ₹50 ಲಕ್ಷ ವೆಚ್ಚದ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಆಧುನಿಕತೆಯ ಪರಿಣಾಮ, ಸಮುದಾಯದ ನಿರ್ಲಕ್ಷ್ಯದಿಂದ ಸಾವಿರಾರು ಮಠಗಳಿಂದು ಅವಸಾನದ ಅಂಚಿಗೆ ಬಂದು ನಿಂತಿವೆ. ಇಂಥ ಮಠಗಳ ಜೀರ್ಣೋದ್ಧಾರಕ್ಕೆ ಗಮನ ನೀಡುವ ಅಗತ್ಯವಿದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಜಡೆ ಸಂಸ್ಥಾನಮಠದ ಮಹಾಂತ ಸ್ವಾಮೀಜಿ ಮಾತನಾಡಿ, ‘12 ನೇ ಶತಮಾನದಲ್ಲಿ ವಿಶ್ವಗುರು, ಮಹಾ ಮಾನವತಾವಾದಿ ಬಸವಣ್ಣ ಅನುಭವ ಮಂಟಪ ರಚಿಸಿ ಜಗತ್ತಿನ ಮೊದಲ ಸಂಸತ್ತು ಸ್ಥಾಪಿಸುವ ಮೂಲಕ ಸಮಾಜದ ಅಂಕು, ಡೊಂಕು ತಿದ್ದಿ ಸಮಾನತೆ ಸಾರಿದರು. ಧಾರ್ಮಿಕ ಕಾರ್ಯಕ್ಕೆ ಸೀಮಿತವಾಗಿದ್ದ ಮಠಗಳನ್ನು ಸಮಾಜಮುಖಿಯಾಗಿ ಪರಿವರ್ತಿಸಿದ ಶ್ರೇಯಸ್ಸು ಹಾನಗಲ್ ಲಿಂ.ಕುಮಾರ ಸ್ವಾಮೀಜಿಗೆ ಸಲ್ಲಬೇಕಿದೆ’ ಎಂದರು.
ಶಾಂತಪುರ ಸಂಸ್ಥಾನಮಠದ ಶಿವಾನಂದ ಸ್ವಾಮೀಜಿ, ಘೋಡಗೆರೆ ವಿರಕ್ತಮಠದ ಪ್ರಭುಲಿಂಗ ಸ್ವಾಮೀಜಿ, ಕೂಸನೂರಿನ ತಿಪ್ಪಯ್ಯಸ್ವಾಮಿ ಆಶ್ರಮದ ಜ್ಯೋತಿರ್ಲಿಂಗಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಹಾವೇರಿಯ ಮಾಜಿ ಶಾಸಕ ಶಿವರಾಜ ಸಜ್ಜನರ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಭದ್ರಪ್ಪ ಪಾಟೀಲ, ಉಪಾಧ್ಯಕ್ಷ ಪ್ರಕಾಶಗೌಡ ಪಾಟೀಲ, ಸದಸ್ಯರಾದ ನಿರ್ಮಲಾ ಹಂಪಣ್ಣನವರ, ಉಮೇಶ ಸೂಡಂಬಿ, ವಿರುಪಾಕ್ಷಪ್ಪ ಗದ್ದಿ, ಮೆಹಬೂಬಬಾಷಾ ಕಿಲ್ಲೇದಾರ, ಡಾ.ಸುನೀಲ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.