ಶಿಗ್ಗಾವಿ: ಅಪಘಾತದಿಂದ ಕಷ್ಟದಲ್ಲಿರುವ ಇತರರ ಜೀವ ಉಳಿಸುವ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಕಾರ್ಯ ಶ್ಲಾಘನಿಯವಾಗಿದ್ದು, ಅದಕ್ಕೆ ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಿಗೇರಿ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸೋಮವಾರ ಐಕ್ಯೂಎಸಿ, ಯುವ ರೆಡ್ ಕ್ರಾಸ್ ಘಟಕ, ಎನ್.ಎಸ್.ಎಸ್ ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ರಕ್ತನಿಧಿ ಕೇಂದ್ರ, ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಮೇಶ ಎನ್.ತೆವರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸೇವಾ ಕಾರ್ಯಗಳ ಕುರಿತು ವಿವಿಧ ಘಟಕಗಳಿಂದ ಪ್ರೇರಣೆ ಮೂಡಿಸಲಾಗುತ್ತಿದೆ. ಅದಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಯೋಜನ ಪಡೆಯಬೇಕು ಎಂದರು.
ಹಾವೇರಿ ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಉಪನ್ಯಾಸ ನೀಡಿ, ರಕ್ತದಾನಿಗಳು ಭಯ ಪಡುವ ಅವಶ್ಯವಿಲ್ಲ. ಅದರಿಂದ ಯಾವುದೇ ತೊಂದರೆಯಿಲ್ಲ. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತಿದೆ. ಆರೋಗ್ಯ ಸುಧಾರಿಸುತ್ತದೆ. ಸಾವುನೋವಿನಲ್ಲಿರುವ ಜನರಿಗೆ ಜೀವದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಸುಮಾರು 45 ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಎನ್.ಎಸ್.ಎಸ್.ಘಟಕದ ಸಂಚಾಲಕ ನಿಂಗಪ್ಪ ಕಲಕೋಟಿ, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ವಿಜಯಲಕ್ಷ್ಮೀ ಸಿ, ಐಕ್ಯೂಎಸಿ ಸಂಚಾಲಕಿ ಲುಬ್ನಾನಾಜ್, ಪ್ಲೆಸ್ ಮೇಟ್ ಸೇಲ್ ಸಂಚಾಲಕ ಮಂಜುನಾಥ ಬಿ, ಕಲ್ಯಾಣ ವಿಭಾಗದ ಸಂಚಾಲಕ ಮಹಬೂಬ್ ಸುಭಾನಿ, ಪ್ರಾಧ್ಯಾಪಕರಾದ ದಿನೇಶಪ್ಪ ಸಿಂಗಾಪುರ, ಲೋಕೇಶ ನಾಯಕ, ವಿಜಯ ಗುಡಿಗೇರಿ, ಉಮೇಶ ಕರ್ಜಗಿ, ಮಹೇಶ ಡುಮನಾಳ, ಮಂದಾಕಿನಿ ಪಾಟೀಲ, ಸಂದೀಪಗೌಡ ಪಾಟೀಲ, ಪ್ರಕಾಶ ಭಿಮರಾಯರ, ಶಶಿ ಹಳ್ಳಿಕೊಪ್ಪದಮಠ, ಮಂಜುನಾಥ ಹೊಸಗುರು, ಅಂಜಲಿ ಡಿಸೋಜಾ, ಬಸವರಾಜ ಪೂಜಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.