ADVERTISEMENT

ಡಿಡಿಪಿಐ ಕಚೇರಿ ಮೇಲೆ ಎಸಿಬಿ ದಾಳಿ: ಜಗದೀಶ್ವರ ಬಳಿ ₹50 ಸಾವಿರ ನಗದು ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 2:43 IST
Last Updated 12 ಏಪ್ರಿಲ್ 2022, 2:43 IST
   

ಹಾವೇರಿ: ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಲ್ಲಿಯ ಡಿಡಿಪಿಐ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ದಾಳಿ ನಡೆಸಿದ್ದು, ಒಟ್ಟು ₹1.69 ಲಕ್ಷ ನಗದು ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಎಸಿಬಿ ಎಸ್ಪಿ ಜಯಪ್ರಕಾಶ, ಡಿವೈಎಸ್ಪಿ ಬಿ.ಆರ್.ಗೋಪಿ ನೇತೃತ್ವದಲ್ಲಿ ಸೋಮವಾರ ಸಂಜೆ ದೇವಗಿರಿ ಸಮೀಪದ ಜಿಲ್ಲಾಡಳಿತ ಭವನದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.ಈ ವೇಳೆ ಡಿಡಿಪಿಐ ಜಗದೀಶ್ವರ ಅವರ ಬಳಿ ಕವರ್‌ನಲ್ಲಿ ₹50 ಸಾವಿರ ನಗದು ಪತ್ತೆಯಾಗಿದೆ. ಕಚೇರಿಯ ಹಲವು ನೌಕರರ ಬಳಿಯೂ ನಗದು ಪತ್ತೆಯಾಗಿದೆ.

₹1.69 ಲಕ್ಷ‘ಕ್ಯಾಶ್‌ ಡಿಕ್ಲೆರೇಷನ್‌ ರಿಜಿಸ್ಟರ್‌’ನಲ್ಲಿ ನಮೂದಾಗಿರಲಿಲ್ಲ. ಈ ಬಗ್ಗೆ ಸಿಬ್ಬಂದಿಗೆ ನೋಟಿಸ್‌ ಕೊಟ್ಟು ವಿವರಣೆ ಕೇಳಲಾಗಿದೆ.

ADVERTISEMENT

‘ವರ್ಗಾವಣೆಯಾದ ಶಿಕ್ಷಕರನ್ನು ಬಿಡುಗಡೆ ಮಾಡಲು, ವೈದ್ಯಕೀಯ ಬಿಲ್ ಪಾಸ್ ಮಾಡಲು, ಬಿಸಿಯೂಟ ಯೋಜನೆ, ಹೊಸ ಶಾಲೆಗೆ ಅನುಮತಿ ನೀಡಲು, ಸಾಮಗ್ರಿ ಖರೀದಿಯಲ್ಲಿ ಕಮಿಷನ್‌ ಸೇರಿದಂತೆ ಡಿಡಿಪಿಐ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಆರೋಪದ ಮೇರೆಗೆ ದಾಳಿ ನಡೆಸಲಾಗಿದೆ. ದಾಖಲೆಗಳ ಪರಿಶೀಲನೆ ಮುಂದುವರಿಸಲಾಗಿದೆ’ ಎಂದು ಎಸಿಬಿ ಡಿವೈಎಸ್ಪಿ ಗೋಪಿ ಬಿ.ಆರ್‌. ತಿಳಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಇನ್‌ಸ್ಪೆಕ್ಟರ್‌ಗಳಾದ ಪ್ರಭಾವತಿ ಶೇತಸನದಿ, ಬಸವರಾಜ ಗುದ್ಲಿ ಮತ್ತು ಇತರ ಸಿಬ್ಬಂದಿ ದಾಳಿ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.