ಶಿಗ್ಗಾವಿ: ‘ಪಾನ ಮುಕ್ತ ದೇಶ ನಿರ್ಮಾಣದಿಂದ ದುಶ್ಚಟಗಳು ದೂರವಾಗಿ ಪ್ರತಿಯೊಬ್ಬರ ಭವಿಷ್ಯ ಉಜ್ವಲವಾಗಲಿದೆ’ ಎಂದು ಶಾಸಕ ಯಾಶೀರ್ ಅಹ್ಮದ್ಖಾನ್ ಪಠಾಣ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಜಿಲ್ಲಾ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸಹಯೋಗದಲ್ಲಿ ನಡೆದ ಗಾಂಧಿಸ್ಮೃತಿ, ಪಾನ ಮುಕ್ತರ ಅಭಿನಂದನಾ ಹಾಗೂ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಸಮಾಜ ಶ್ರೇಯೋಭಿವೃದ್ಧಿಗೆ ಧರ್ಮಸ್ಥಳ ಸಂಘದ ಸೇವಾ ಕಾರ್ಯ ಶ್ಲಾಘನೀಯ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪೂರಕ ಯೋಜನೆ ಜಾರಿಗೆ ತರುವುದರ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದರು.
ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ‘ವ್ಯಸನಗಳು ಮನುಷ್ಯನ ಬದುಕನ್ನು ಹಾಳು ಮಾಡುತ್ತಿವೆ. ಸಂಘವು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ನೀಡಿದೆ’ ಎಂದರು.
ಧರ್ಮಸ್ಥಳ ಸಂಘದ ಧಾರವಾಡ ವಿಭಾಗದ ನಿರ್ದೇಶಕ ಬಾಸ್ಕರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣ ಕುಮಾರ ಶೆಟ್ಟರ್, ಸದಸ್ಯ ಶಿವಾನಂದ ಮ್ಯಾಗೇರಿ, ಜಿಲ್ಲಾಘಟಕದ ಅಧ್ಯಕ್ಷ ಶಿವರಾಯ ಪ್ರಭು, ಸಂಘದ ತಾಲ್ಲೂಕು ನಿದೇಶಕ ಶೇಖರ ನಾಯಕ ಮಾತನಾಡಿದರು.
ವಿರಕ್ತಮಠದ ಸಂಗನಬಸವ ಸ್ವಾಮೀಜಿ ಉದ್ಘಾಟಿಸಿದರು. ಮುಖಂಡರಾದ ಬಸಣ್ಣ ಹೆಸರೂರ, ಮೈಲಾರೆಪ್ಪ ತಳ್ಳಿಹಳ್ಳಿ, ವಾಸುದೇವಮೂರ್ತಿ ಮೂಡೆ, ಬಸವರಾಜ ಹುಲತ್ತಿ, ನಿಂಗಪ್ಪ ನೆಗಳೂರ, ಎಸ್.ಎಫ್. ಮಣಕಟ್ಟಿ, ಮಂಜುನಾಥ ಕಾರಡಗಿ, ಮಲ್ಲಮ್ಮ ಸೋಮನಕಟ್ಟಿ, ಅನಸೂಯಾ ಬಳಿಗಾರ, ರಾಘವೇಂದ್ರ ಪೂಜಾರ ಇದ್ದರು.
ಬೆಳಿಗ್ಗೆ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಿಂದ ವಿರಕ್ತಮಠದವರೆಗೆ ಜಾಗೃತಿ ಜಾಥಾ ಹಾಗೂ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.